ಕ್ಷಯರೋಗದ ಬಗೆಗಿನ ಭೀತಿಯನ್ನು ತ್ವರಿತವಾಗಿ ಕೊನೆಗಾಣಿಸೋಣ

1 year ago

ಕ್ಷಯಮುಕ್ತ ಅಭಿಯಾನದಲ್ಲಿ ಟಿಹೆಚ್ಇಒ ಎನ್.ಎಸ್.ಮಂಜುನಾಥ್

ಚಿತ್ರದುರ್ಗ: ಕ್ಷಯರೋಗದ ಬಗೆಗಿನ ಭೀತಿಯನ್ನು ತ್ವರಿತವಾಗಿ  ಕೊನೆಗಾಣಿಸೋಣ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ನಗರದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ವತಿಯಿಂದ ಜರುಗಿದ ಕ್ಷಯಮುಕ್ತ 100 ದಿನಗಳ ಅಭಿಯಾನದಲ್ಲಿ ಅವರು ಮಾತನಾಡಿದರು. 

ಕ್ಷಯ ರೋಗವು ಭಾರತದ ಸಾರ್ವಜನಿಕ ಆರೋಗ್ಯಕ್ಕೆ ಅತಿ ದೊಡ್ಡ ತೊಂದರೆಗಳಲ್ಲಿ ಒಂದಾಗಿರುತ್ತದೆ. ಪ್ರತಿ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಜನ ಕ್ಷಯರೋಗಕ್ಕೆ ತುತ್ತಾಗುತ್ತಾರೆ. ಭಾರತವನ್ನು ಕ್ಷಯ ಮುಕ್ತಗೊಳಿಸಲು ಸಮುದಾಯವು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ ಎಂದರು.

ಕ್ಷಯರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟುಮಾಡುತ್ತದೆ. ಕ್ಷಯ ರೋಗಿಗಳು ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರ ಇಟ್ಟುಕೊಳ್ಳಬೇಕು. ರೋಗಿಯ ಕಫವನ್ನು ಮನಸ್ಸಿಗೆ ಬಂದ ಕಡೆ ಉಗಿಯಬಾರದು. ಕಫವನ್ನು ಡಬ್ಬಿಯಲ್ಲಿ ಶೇಖರಿಸಿ ಗುಂಡಿ ತೋಡಿ ಮುಚ್ಚಬೇಕು ಎಂದರು.

ನಿಮ್ಮ ಮನೆಯಲ್ಲಿ ಹಾಗೂ ಸುತ್ತಮುತ್ತಲಿನವರಲ್ಲಿ ಕ್ಷಯರೋಗದ ಲಕ್ಷಣಗಳು ಉಳ್ಳುವವರನ್ನು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕು. ಕ್ಷಯರೋಗವನ್ನು ಬೇಗ ಪತ್ತೆ ಹಚ್ಚಿ, ಪೌಷ್ಟಿಕ ಆಹಾರ ಸೇವಿಸಿ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಕ್ಷಯಮುಕ್ತ ನೂರು ದಿನಗಳ ಅಭಿಯಾನ ಈಗಾಗಲೇ ಡಿ.07 ರಿಂದ ಪ್ರಾರಂಭವಾಗಿದ್ದು, 2025ರ ಮಾರ್ಚ್ 24 ರವರೆಗೆ ಎಲ್ಲಾ ಆಯುಷ್ಮಾನ್ ಆರೋಗ್ಯ ಮಂದಿರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಎಲ್ಲಾ ಗ್ರಾಮಗಳ ಮನೆಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ ಹಾಗೂ ಬಿ.ಜಾನಕಿ ಟಿಬಿ ಜಾಗೃತಿ ಗೀತೆಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎನ್.ಸುರೇಶ್, ಸಹಶಿಕ್ಷಕರಾದ ಸುಕನ್ಯಾ, ಲಕ್ಷ್ಮೀದೇವಿ, ಸರಸ್ವತಿ, ಅಶಪುಲ್ಲ, ಅಪ್ಸಾನ ಬಾನು, ಅಮೀನಾ, ಮಾರುತಿ ನಗರ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಭಾಗ್ಯಲಕ್ಷ್ಮಿ, ತಾಲೂಕ ಆಶಾ ಬೋಧಕಿ ತಬಿತಾ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ನಗರ ಟಿಬಿ ಚಿಕಿತ್ಸಾ ಮೇಲ್ವಿಚಾರಕ ಸಂತೋಷ್, ಯೋಗ ಶಿಕ್ಷಕ ರವಿ ಅಂಬೇಕರ್ ಹಾಜರಿದ್ದರು.

Leave a Reply