ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆ ಲೋಕಸಭೆ ಅಧಿವೇಶನದ ನಂತರ ಚರ್ಚೆ

5 months ago

ಬೆಂಗಳೂರು: ಮಂತ್ರಿಮಂಡಲ ಪುನಾರಚನೆ ಮತ್ತು ಅಧಿಕಾರ ಹಸ್ತಾಂತರ ಕುರಿತು ರಾಜ್ಯ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ವಿದ್ಯಮಾನಗಳಿಗೆ ಕೆಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೂರ್ಣ ವಿರಾಮ ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿರುವ ಅವರು, ಲೋಕಸಭೆಯ ಚಳಿಗಾಲದ ಅಧಿವೇಶನದವರೆಗೆ ಈ ಕುರಿತಾಗಿ ಯಾರು ಕೂಡ ಮಾತನಾಡಬಾರದು. ಅಧಿವೇಶನ ಮುಗಿದ ಬಳಿಕ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ನಡೆಸಿ ಸಭೆಗೆ ಸಮಯ ನಿಗದಿಪಡಿಸಲಾಗುವುದು. ಅಲ್ಲಿ ಎಲ್ಲ ವಿದ್ಯಮಾನಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸುಮ್ಮನೆ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಮಂತ್ರಿಗಳೂ ಸೇರಿದಂತೆ ಪಕ್ಷದ ಯಾವುದೇ ನಾಯಕರು ಮಂತ್ರಿಮಂಡಲ ಪುನಾರಚನೆ ನಾಯಕತ್ವ ಬದಲಾವಣೆ ಕುರಿತಾಗಿ ಯಾವುದೇ ಮಾತನಾಡಬಾರದು. ಯಾವುದೇ ಶಾಸಕರು ಮತ್ತು ಮಂತ್ರಿಗಳು ಭೋಜನ ಅಥವಾ ಉಪಹಾರ ಕೂಟಗಳನ್ನು ಏರ್ಪಡಿಸುವ ಮೂಲಕ ಗೊಂದಲ ಉಂಟು ಮಾಡುವ ಕೆಲಸಗಳಿಗೆ ಕೈ ಹಾಕಬಾರದು ಎಂಬ ತಿಳುವಳಿಕೆ ನೀಡಿರುವುದಾಗಿ ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಸಿಎಂ ಮತ್ತು ಡಿಸಿಎಂ ಪಕ್ಷದ ಎಲ್ಲಾ ನಾಯಕರಿಗೂ ಈ ವಿಷಯವನ್ನು ತಿಳಿಸುವ ಮೂಲಕ ಪಕ್ಷದ ಮಟ್ಟದಲ್ಲಿ ಉಂಟಾಗುವ ಗೊಂದಲಗಳಿಗೆ ಅವಕಾಶವಿಲ್ಲದೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದು, ಲೋಕಸಭೆಯ ಅಧಿವೇಶನ ಮುಗಿದ ನಂತರ ದೆಹಲಿಯಲ್ಲಿಯೇ ಈ ಕುರಿತಾಗಿ ಸಭೆ ನಡೆಸಲಾಗುವುದು. ಅಲ್ಲಿ ಮಂತ್ರಿಮಂಡಲ ಪುನರಚನೆ ಮತ್ತು ನಾಯಕತ್ವ ಬದಲಾವಣೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.

Leave a Reply