ಬೆಂಗಳೂರು : ರಾಜ್ಯದಲ್ಲಿ ಬಡ, ಹಿಂದುಳಿದ ಮತ್ತು ಮಧ್ಯಮವರ್ಗದವರಿಗೆ ರಿಯಾಯಿತಿ ದರದಲ್ಲಿ ಔಷಧಗಳು ಮತ್ತು ಶಸ್ತ್ರಚಿಕಿತ್ಸೆಯ ಪರಿಕರಗಳನ್ನು ಒದಗಿಸುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಅತ್ಯುತ್ತಮವಾಗಿ ಜಾರಿಯಾಗಿದ್ದು, ಈ ವರೆಗೆ 1052 ಜನೌಷಧ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಇಡೀ ದೇಶದಲ್ಲಿ ಉತ್ತರ ಪ್ರದೇಶದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇರಳ ಮೂರನೇ ಸ್ಥಾನದಲ್ಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆಯಲು ಸರ್ಕಾರ ಕಾರ್ನೋನ್ಮುಖವಾಗಿದೆ.ಇದರ ಜೊತೆ ರಾಜ್ಯದಲ್ಲಿ ಹೊಸದಾಗಿ ಮತ್ತೆ 500 ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 40 ಹೊಸ ಮಳಿಗೆಗಳಿಗೆ ಅನುಮತಿ ನೀಡುವಂತೆ ಬಿಪಿಪಿಐಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷದ ಫೆಬ್ರವರಿ ನಂತರ ಸುಮಾರು 300 ಮಳಿಗೆಗಳನ್ನು ತೆರೆಯಲಾಗಿದ್ದು, ಬೇಡಿಕೆಗಳಿಗೆ ಅನುಗುಣವಾಗಿ ಮಳಿಗೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಜನೌಷಧಿ ಮಳಿಗೆಗಳು ಅತ್ತುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಪ್ರಸ್ತಾವನೆ ಸಲ್ಲಿಸಿರುವುದನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 200 ಔಷಧ ಮಳಿಗೆಗಳಿವೆ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಿಂದಲೂ ಜನೌಷಧಿ ಮಳಿಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ಒತ್ತಡವಿದೆ. ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಎಂಬ ಗ್ರಾಮದಲ್ಲೂ ಜನೌಷಧಿ ಮಳಿಗೆ ತೆರೆದಿರುವುದು ವಿಶೇಷವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೊಸ ಮಳಿಗೆಗಳಿಗೆ ಮಂಜೂರಾತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜನರಿಕ್ ಔಷಧಿಗಳು ಬ್ರಾಂಡೆಡ್ ಆಗಿದ್ದು, ಮಾರುಕಟ್ಟೆಗಿಂತ ಶೇ.50 ರಿಂದ 80 ರಷ್ಟು ಅಗ್ಗದ ದರದಲ್ಲಿ ದೊರೆಯುತ್ತಿವೆ. ಎನ್.ಎ.ಬಿ.ಎಲ್ ಪ್ರಯೋಗಾಲಯದಲ್ಲಿ ಜನೌಷಧಿ ಮಳಿಗೆಗಳನ್ನು ಪರೀಕ್ಷಿಸಿ ಸಾರ್ವಜನಿಕ ಉಪಯೋಗಕ್ಕೆ ಜನೌಷಧಿ ಕೇಂದ್ರಗಳಲ್ಲಿ ದೊರೆಯುವಂತೆ ಮಾಡಲಾಗುತ್ತಿದೆ. ಒಟ್ಟು 1451 ಔಷಧಗಳು ಮತ್ತು 240 ಶಸ್ತ್ರಚಿಕಿತ್ಸೆ ಪರಿಕರಗಳು, ದುಬಾರಿ ವೆಚ್ಚದ ಕ್ಯಾನ್ಸರ್ ಔಷಧಗಳು ಸಹ ಇಲ್ಲಿ ದೊರೆಯುತ್ತಿವೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ ಪ್ರಾರಂಭಿಸಲು ಉದ್ದೇಶ ಹೊಂದಿರುವ ಫಾರ್ಮಸಿ ಪದವಿಧರರಿಂದ ಮಳಿಗೆಗಳನ್ನು ತೆರೆಯಲು ಹೆಚ್ಚಿನ ಬೇಡಿಕೆ ಬರುತ್ತಿದೆ. ಸ್ವಾಯತ್ತ ಸಂಸ್ಥೆಗಳಿಗೆ 120 ಚದರ ಅಡಿ ಸ್ಥಳವನ್ನು ಉಚಿತವಾಗಿ ನೀಡಲಾಗುತ್ತಿದೆ. ಬ್ಯೂರೋ ಆಫ್ ಫಾರ್ಮಸಿ ಪಬ್ಲಿಕ್ ಸೆಕ್ಟರ್ ಯೂನಿಟ್ಸ್ ಆಫ್ ಇಂಡಿಯಾ [ಬಿಪಿಪಿಐ] ಪ್ರತಿಯೊಂದು ಜನೌಷಧಿ ಮಳಿಗೆ ಪ್ರಾರಂಭಿಸಲು ಜನೌಷಧಿ ಮಳಿಗೆ ತೆರೆಯುವ ಪ್ರತಿ ಮಳಿಗೆಗೆ ಬಿಪಿಪಿಐಯಿಂದ ಮಾಸಿಕ ಖರೀದಿಗಾಗಿ ವಹಿವಾಟಿಗೆ ತಕ್ಕಂತೆ ಮಾಸಿಕ ಶೇ 15 ರಂತೆ ಮಾಸಿಕ 15,000 ರೂ ಗಳನ್ನು ಮೀರದಂತೆ ಒಟ್ಟಾರೆ ರೂ 2.50 ಲಕ್ಷಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದರು.
ಜನೌಷಧಿ ಮಳಿಗೆಗಳಿಂದ ಬಿಪಿಎಲ್ ಮತ್ತು ಬಡ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಆರೋಗ್ಯಕ್ಕಾಗಿ ಮಾಡುತ್ತಿರುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮತ್ತಷ್ಟು ಮಳಿಗೆಗಳನ್ನು ತೆರೆದು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಈ ವರ್ಷ 300 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಉತ್ತಮ ಸಾಧನೆ ಮಾಡಿದ್ದೇವೆ ಎಂದರು.



