ಯಲಗಟ್ಟೆ ಗ್ರಾಮಕ್ಕೆ ಮೊದಲ ಡಾಕ್ಟರೇಟ್ ಪದವಿ.
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಗ್ರಾಮದ ಗೌಡ್ರು ಕಮಲಮ್ಮ ಮತ್ತು ವಿರೂಪಾಕ್ಷಪ್ಪ ಅವರ ಪುತ್ರ ಜಗದೀಶ್ ಜಿ.ವಿ. ಅವರು “ಆಧುನಿಕ ಕರ್ನಾಟಕದ ಕನ್ನಡ ಸಂಘಟನೆಗಳು: ಚರಿತ್ರೆ ಮತ್ತು ವಿಮರ್ಶೆ” ಎಂಬ ವಿಷಯ ಕುರಿತು ಸಲ್ಲಿಸಿದ ಪಿಎಚ್.ಡಿ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಜನವರಿ 10ರಂದು ನಡೆದ 32ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿದೆ.

ಚರಿತ್ರೆ ವಿಭಾಗದ ಪ್ರಾಧ್ಯಾಪಕ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಜಗದೀಶ್ ಜಿ.ವಿ. ಅವರ ಪಿಎಚ್.ಡಿ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದಾರೆ. ಜಗದೀಶ್ ಅವರ ಸಂಶೋಧನೆಯ ವಿಷಯ ಆಧುನಿಕ ಕರ್ನಾಟಕದ ಕನ್ನಡ ಸಂಘಟನೆಗಳನ್ನು ವಿಸ್ತೃತವಾಗಿ ಅಧ್ಯಯನಕ್ಕೊಳಪಡಿಸಿದ ಮೊದಲ ಪಿಎಚ್.ಡಿ ಮಹಾಪ್ರಬಂಧವಾಗಿದೆ. ಹಾಗೂ ಯಲಗಟ್ಟೆ ಗ್ರಾಮಕ್ಕೆ ಸಂದ ಮೊದಲ ಡಾಕ್ಟರೇಟ್ ಪದವಿಯಾಗಿರುವುದು ವಿಶೇಷ.
ರೈತ ಕುಟುಂಬದ ಹಿನ್ನೆಲೆಯುಳ್ಳ ಜಗದೀಶ್ ಜಿ.ವಿ. ಅವರ ಈ ಸಾಧನೆಗೆ ಮಾರ್ಗದರ್ಶಕರಾದ ವಿಜಯ್ ಪೂಣಚ್ಚ ಹಾಗೂ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಕೃಷ್ಣ ರೈ, ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮತ್ತು ಡಾ.ಎನ್.ಚಿನ್ನಸ್ವಾಮಿ ಸೋಸಲೆ ಅವರು ಅಭಿನಂದಿಸಿದ್ದಾರೆ. ಜಗದೀಶ್ ಅವರ ತಾಯಿ ಕಮಲಮ್ಮ, ಸಹೋದರ ತಿಪ್ಪೇಸ್ವಾಮಿ, ಕುಟುಂಬದವರು ಹಾಗೂ ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಗದೀಶ್, ತಾವು ಪ್ರಾಥಮಿಕ ಶಿಕ್ಷಣವನ್ನು ಕಲಿತ ಸೂರನಹಳ್ಳಿ ಹಾಗೂ ಚೌಳೂರು ಸರ್ಕಾರಿ ಶಾಲೆಗಳ ಹಾಗೂ ಉನ್ನತ ಶಿಕ್ಷಣವನ್ನು ಓದಿದ ಚಳ್ಳಕೆರೆ, ಹಿರಿಯೂರು ಚಿತ್ರದುರ್ಗದ ಕಾಲೇಜುಗಳ ಹಾಗೂ ಹಂಪಿ ವಿಶ್ವವಿದ್ಯಾಲಯದ ಮೇಷ್ಟ್ರುಗಳನ್ನು ಸ್ಮರಿಸುತ್ತಾ ಇದೆಲ್ಲವೂ ಅವರು ಕಲಿಸಿದ್ದು ಎಂದು ಹೇಳಿದ್ದಾರೆ.




