ಸ್ವಾಮೀಜಿಗಳೇ ಸಮಾಜವನ್ನು ದಾರಿತಪ್ಪಿಸುತ್ತಿರುವುದು ಸ್ವಾಸ್ಥ್ಯ ಸಮಾಜವನ್ನು ಒಡೆಯುವ ಹುನ್ನಾರ: ಬಿ ಕೆ ಹರಿಪ್ರಸಾದ್

1 year ago

ಸಂವಿಧಾನ ಬದಲಾವಣೆಯ ಮುಂಚೂಣಿಯ ನಾಯಕರಂತೆ ವರ್ತಿಸುತ್ತಿದ್ದ ಪೇಜಾವರರು, ತಮ್ಮ ಹೇಳಿಕೆಗಳು ಹಾಗೂ ನಡವಳಿಕೆಗಳಿಂದ ಪ್ರಜ್ಞಾವಂತ ಸಮಾಜ ತಿರುಗಿ ಬಿದ್ದಿರುವುದನ್ನ ನೋಡಿ “ನಾನು ಸಂವಿಧಾನ ವಿರೋಧಿ ಹೇಳಿಕೆಯೇ ನೀಡಿಲ್ಲ” ಎಂದು ತಾವೇ ಆಡಿದ ಮಾತುಗಳನ್ನು ತಿರುಚಿಕೊಳ್ಳುತ್ತಿರುವುದು ವಿಪರ್ಯಾಸ.

ಸಮಾಜ ದಾರಿ ತಪ್ಪಿದರೆ ತಿದ್ದುವ ಹಾಗೂ ಧರ್ಮದೊಳಗಿನ ಸಹಬಾಳ್ವೆಯ ತಿರುಳನ್ನು ತಿಳಿ ಹೇಳುವ ಸ್ವಾಮೀಜಿಗಳೇ ಸಮಾಜವನ್ನು ದಾರಿತಪ್ಪಿಸುತ್ತಿರುವುದು ಸ್ವಾಸ್ಥ್ಯ ಸಮಾಜವನ್ನು ಒಡೆಯುವ ಹುನ್ನಾರ ಮಾತ್ರವಲ್ಲ ಪೇಜಾವರರ ನಡೆಗಳು ಮತೀಯವಾದಿ ಸಂಘಟನೆ ನಾಯಕರಂತೆ ಕಾಣುತ್ತಿದೆ.

ಸಂವಿಧಾನದಡಿಯಲ್ಲಿ ಚುನಾಯಿತ ಸರ್ಕಾರದ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ಮಾಧ್ಯಮ ವಕ್ತಾರರಂತೆ “ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ” ಎಂದು ಬಹಿರಂಗ ಹೇಳಿಕೆ ನೀಡುವುದು ಪೇಜಾವರರು ಬಿಜೆಪಿ ಪಕ್ಷದ ನಿಷ್ಟೆಯನ್ನು ಪದೇ ಪದೇ ಸಾಬೀತು ಮಾಡುತ್ತಿರುವಂತಿದೆ. ಆಧಾರ ಇಲ್ಲದೇ ಒಂದು ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡುವುದು ಯತಿಗಳಾದಂತವರಿಗೆ ತರವಲ್ಲ.

ಸಂವಿಧಾನದ ವಿರೋಧಿ ನಿಲುವುಗಳಿಂದ ದಲಿತರು, ಬಹುಜನ ಶೋಷಿತ ಸಮುದಾಯಗಳ ಆಕ್ರೋಶವನ್ನು ಎದುರಿಸಲಾಗದೆ ಪೇಜಾವರರು ಅಲ್ಪಸಂಖ್ಯಾತರ ವಿರುದ್ಧ ಮಾತಾಡುವ ಮೂಲಕ ಚರ್ಚೆಯನ್ನೇ ದಾರಿ ತಪ್ಪಿಸುತ್ತಿದ್ದಾರೆ. ಸಂವಿಧಾನ ಮೂಲಕವೇ ಆಯ್ಕೆಯಾಗಿ ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿದ ಬಿಜೆಪಿಯ ನಾಯಕರಿಗೆ ಸಾರ್ವಜನಿಕ ಜೀವನದಲ್ಲಿ ಯೋಗ್ಯತೆಯೇ ಇಲ್ಲ ಎಂದು ಜನರು ತಕ್ಕ ಉತ್ತರ ನೀಡಿದ್ದಾರೆ.ಅಂತಹ ದುರ್ದೈವ ಪೇಜಾವರರು ಬರ ಮಾಡಿಕೊಳ್ಳದೇ ಇರಲಿ.

ಸಂವಿಧಾನದ ವಿರುದ್ಧ ತಮಗಿರುವ ಅಸಹನೆ, ಆಕ್ರೋಶವನ್ನು ಸಾಬೀತು ಮಾಡುತ್ತಿರುವ ಪೇಜಾವರರು, ಇದೇ ಸಂವಿಧಾನದಡಿಯಲ್ಲಿ ರಕ್ಷಣೆ ಪಡೆಯುತ್ತಿರುವುದನ್ನು ಮರೆಯಬಾರದು. ತಮಗೆ ಗೌರವ ನೀಡುವ ಸಂವಿಧಾನ ಬರಲಿ ಎಂದ ರಾಜ್ಯದ ಸಂವಿಧಾನದ ರಕ್ಷಕರಾಗಿರುವ ರಾಜ್ಯಪಾಲರಿಗೆ ಮನವಿ ನೀಡುವುದು ಅತ್ಯಂತ ಖಂಡನೀಯ. ಕೂಡಲೇ ರಾಜ್ಯಪಾಲರು ಸಂವಿಧಾನ ವಿರೋಧಿ ಮನಸ್ಥಿತಿ ಸ್ವಾಮೀಜಿಗಳ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸುತ್ತೇನೆ.

– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ

Leave a Reply