ಬಿಜೆಪಿಗರು ಒಬ್ಬ ಮಹಿಳೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ: ಎಚ್ ಸಿ ಮಹದೇವಪ್ಪ

7 months ago

ದಸರಾ ಹಬ್ಬದ ಉದ್ಘಾಟನೆಯನ್ನು ನೆರವೇರಿಸಲಿರುವ ಬಾನು ಮುಷ್ತಾಕ್ ಅವರು ತಮ್ಮ ಸುತ್ತಲಿನ ಸಾಮಾಜಿಕ ಪಿಡುಗುಗಳ ವಿರುದ್ಧ, ತಮ್ಮೊಳಗಿನ ಧಾರ್ಮಿಕ ಸಂಕೋಲೆಗಳ ವಿರುದ್ಧ ಗಟ್ಟಿಯಾಗಿ ದನಿ ಮಾಡಿದಂತವರು.‌ ರೈತರು, ಮಹಿಳೆಯರ ಪರವಾದ ದನಿಯಾಗಿ ಹಲವಾರು ಕಾಲ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರಿಗೆ ಇತ್ತೀಚೆಗೆ ಬೂಕರ್ ಪ್ರಶಸ್ತಿ ಬಂದಿರುವುದು ನಾವೆಲ್ಲರೂ ಸಹಜವಾಗಿ ಹೆಮ್ಮೆ ಪಡಬೇಕಾದ ಸಂಗತಿ.

ನಾಡು ನುಡಿ ಸಂಸ್ಕೃತಿ ಮತ್ತು ಸಾಹಿತ್ಯದ ಗಂಧಗಾಳಿ ಇಲ್ಲದೇ ಬರೀ ದ್ವೇಷವನ್ನೇ ಉಸಿರಾಡುತ್ತಿರುವ ಬಿಜೆಪಿಗರು ಒಬ್ಬ ಮಹಿಳೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಇನ್ನು ಬಿಜೆಪಿಗರಿಂದಲೇ ಛೀಮಾರಿ ಹಾಕಿಸಿಕೊಂಡು, ಟಿಕೆಟ್ ತಪ್ಪಿದ ಕ್ಷಣದಿಂದ ವಿಚಲಿತರಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಬಾನು ಮುಷ್ತಾಕ್ ಅವರ ಆಯ್ಕೆಯ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ ದ್ವೇಷದ ಹಿತಾಸಕ್ತಿ ಬಿಟ್ಟರೆ, ಸಾರ್ವಜನಿಕ ಹಿತಾಸಕ್ತಿ ಏನೂ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿ ಇರುವುದರಿಂದ ಇವರ ಕೋಮು ರಾಜಕೀಯಕ್ಕೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.

ಸಾಹಿತ್ಯದ ಮೂಲಕ ನಾಡಿಗೆ ಹೆಸರು ತಂದವರನ್ನು ಜಾತಿ ಧರ್ಮದ ಮೇಲೆ ಅಳೆಯುವುದು, ಅವರ ಅರ್ಹತೆಯನ್ನು ಪ್ರಶ್ನಿಸುವುದು ಮನುವಾದದ ಮೂಲ ಗುಣ. ಆದರೆ ಈ ನೆಲದಲ್ಲಿ ಬಾಬಾ ಸಾಹೇಬರ ತಿಳುವಳಿಕೆಯೂ ಸಹ ಬಲವಾಗಿ ಇರುವುದರಿಂದ ಈ ಮನುವಾದಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಅವರೊಬ್ಬರೇ ಸಾಕು.

ದಸರಾ ಎಂಬುದು ಎಲ್ಲರನ್ನೂ ಒಳಗೊಂಡಂತಹ ನಾಡಹಬ್ಬವೇ ಹೊರತು, ಬಿಜೆಪಿ  ಪಕ್ಷದ ಕಚೇರಿಗಾಗಲೀ ಅಥವಾ ಅವರನ್ನು ಹೀಗೆ ದ್ವೇಷಮಯವಾಗಿ ರೂಪಿಸುವ RSS ಕಚೇರಿಗಾಗಲೀ ಸಂಬಂಧಿಸಿದ ಹಬ್ಬದಲ್ಲ. ಈ ಸಂಗತಿಯನ್ನು ಬಿಜೆಪಿಗರು ಬೇಗ ಅರಿತರೆ ಉತ್ತಮ.

– ಡಾ. ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply