ನಕಲಿ ಶಾಮಣ್ಣರಿಗೆ ದೇಶದ ಇತಿಹಾಸ ಅಥವಾ ಅರ್ಥಶಾಸ್ತ್ರದ ಎ.ಬಿ.ಸಿ.ಡಿ.ಗೊತ್ತಿಲ್ಲ.
ಗೊತ್ತಿರುವುದು ರಾಮ ಮತ್ತು ಕೃಷ್ಣ ಹಾಗೂ ಕೊಚ್ಚು ಮತ್ತು ಕೊಲ್ಲು ಎಂಬ ಶಬ್ದಗಳು ಮಾತ್ರ.
ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ರಾಜಕೀಯ ಬದುಕು ಅಧಿಕೃತವಾಗಿ ನಿನ್ನೆ ಕೊನೆಗೊಂಡಿತು. ಕಳೆದ 33 ವರ್ಷಗಳಿಂದ ನಿರಂತರವಾಗಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರು ತಮ್ಮ ವಿದ್ವತ್, ಸೌಜನ್ಯ ಹಾಗೂ ಆರ್ಥಿಕ ಚಿಂತನೆಗಳ ಮೂಲಕ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗೌರವ ಗಳಿಸಿದ್ದರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
1990ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಹತ್ಯೆಯಾದಾಗ, ಸಹಜವಾಗಿ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಲ್ಲರೂ ಊಹಿಸಿದ್ದರು.
ಆದರೆ, ಈ ಸಂದರ್ಭದಲ್ಲಿ ಬಿ.ಜೆ.ಪಿ. ಆಡಿದ ನಾಟಕ ತೀವ್ರ ಅಸಹ್ಯ ಮೂಡಿಸಿದವು. ವಿದೇಶಿ ಹೆಣ್ಣುಮಗಳಿಗೆ ಪ್ರಧಾನಿ ಹುದ್ದೆ ಬೇಡ ಎಂದು ಕಾರ್ಯಕರ್ತರು ಬೀದಿಗಳಿದರು. ಅಂದಿನ ಬಿ.ಜೆ.ಪಿ.ಯ ಸ್ಟಾರ್ ಪ್ರಚಾರಕಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಪ್ರಧಾನಿಯಾದರೆ, ನಾನು ತಲೆಬೋಳಿಸಿಕೊಂಡು ವಿಧವೆಯ ಹಾಗೆ ಬಿಳಿಸೀರೆ ಉಟ್ಟು ಬದುಕುತ್ತೇನೆ ಎಂದು ಘೋಷಿಸಿದ್ದರು.
ತನ್ನ ಪತಿಯ ಸಾವಿನ ದುಃಖದಲ್ಲಿದ್ದ ಸೋನಿಯಾ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಂದು ದಿನ ಅನಿರೀಕ್ಷಿತವಾಗಿ ನಾನು ಪ್ರಧಾನಿಯಾಗುವುದಿಲ್ಲ ಎಂದು ಘೋಷಿಸಿದರು. ಕಾಂಗ್ರೆಸ್ ಪಕ್ಷದಿಂದ ಭಾರತದ ಪ್ರಧಾನಿಯಾಗಿ ಡಾ.ಮನಮೋಹನ ಸಿಂಗ್ ಆ ಹುದ್ದೆ ನಿರ್ವಹಿಸುತ್ತಾರೆ ಎಂದು ಹೇಳುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದರು.
ಸೋನಿಯಾ ಗಾಂಧಿಯವರು 33 ವರ್ಷಗಳ ಹಿಂದೆ ತೆಗೆದುಕೊಂಡ ಆ ನಿರ್ಧಾರದಿಂದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ತೀವ್ರವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬ ಪ್ರಸಿದ್ಧಿಗೆ ಬರಲು ಕಾರಣವಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಇಂದಿನ ಪಾಕಿಸ್ತಾನದಲ್ಲಿ ಜನಿಸಿದ ಡಾ.ಸಿಂಗ್ ಪಂಜಾಬ್ ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದರು. ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಆ್ಯಡಂ ಸ್ಮಿತ್ ನ ಸ್ಮಾರಕ ನೀಡಲಾಗುವ ಚಿನ್ನದ ಪದಕವನ್ನು ಪಡೆದ ಮೊದಲ ಏಷ್ಯಾದ ನಾಗರೀಕ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅರ್ಥಖಾತೆಯ ಸಚಿವರನ್ನಾಗಿ ನೇಮಕ ಮಾಡಿಕೊಂಡರು. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಭಾರತ ಆ ಕಾಲಘಟ್ಟದಲ್ಲಿ ಜಾಗತೀಕರಣಕ್ಕೆ ತೆರೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು.
ದೇಶವನ್ನು ತಮ್ಮ ಪ್ರಖರ ಆರ್ಥಿಕ ಚಿಂತನೆಗಳ ಮೂಲಕ ಹಾಗೂ ಅನುಷ್ಠಾನಕ್ಕೆ ತಂದ ಯೋಜನೆಗಳ ಮೂಲಕ ಸಂಕಷ್ಟದಿಂದ ಪಾರುಮಾಡಿ ದೇಶದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.
ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೊದಲ ಐದು ವರ್ಷ ನಿಜಕ್ಕೂ ಭಾರತದ ಪಾಲಿಗೆ ಸುವರ್ಣ ಅಧ್ಯಾಯ ಎಂದು ಕರೆಯಬಹುದು. ಆದರೆ, ಎರಡನೇ ಅವಧಿಯಲ್ಲಿ ದೂರವಾಣಿಗೆ ಸಂಬಂಧಿಸಿದಂತೆ 2G ಹಗರಣ, ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಪ್ರಧಾನಿಯಾಗಿದ್ದುಕೊಂಡು ನಿಯಂತ್ರಿಸಲಾಗದ ಅಸಹಾಯಕತೆಗೆ ಒಳಗಾದರು.
ಕಾಂಗ್ರೆಸ್ ಪಕ್ಷ ತನ್ನೊಂದಿಗೆ ಅಧಿಕಾರ ಹಂಚಿಕೊಂಡಿದ್ದ ಮಿತ್ರ ಪಕ್ಷಗಳ ಭ್ರಷ್ಟಾಚಾರಕ್ಕೆ ಕಣ್ಮುಚ್ಚಿ ಕುಳಿತಿತು. ಅಂತಿಮವಾಗಿ ಸುಳ್ಳಿನ ಹರಿಶ್ಚಂದ್ರ ಅಧಿಕಾರಕ್ಕೆ ಬರಲು ಕಾರಣವಾಯಿತು.
ಅತ್ಯಂತ ಮಿತಭಾಷಿಯಾಗಿದ್ದ ಮನಮೋಹನ ಸಿಂಗ್ ಅವರು ಎಂದಿಗೂ ಮಾಧ್ಯಮಗಳಿಗೆ ಉತ್ತರ ಹೇಳದೆ ತಪ್ಪಿಸಿಕೊಂಡವರಲ್ಲ. ವರ್ಷಕ್ಕೆ ಕನಿಷ್ಠ ಹತ್ತು ಬಾರಿ ನೇರವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಅಭಿವೃದ್ಧಿ ಚಟುವಟಿಕೆಗಾಗಿ ಇಡೀ ಭಾರತದ ಮೂಲೆ ಮೂಲೆ ಸುತ್ತಾಡಿದರೆ ಹೊರತು, ಸಾರ್ವಜನಿಕರ ಹಣದಲ್ಲಿ ಇಂದಿನ ಸುಳ್ಳಿನ ಸಾರ್ವಭೌಮನ ಮಾದರಿಯಲ್ಲಿ ಪಕ್ಷ ಕಟ್ಟಲು ತಿರುಗಾಡಲಿಲ್ಲ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ಅಥವಾ ನಾಲ್ಕು ಬಹಿರಂಗ ಸಭೆಯಲ್ಲಿ ಭಾಗವಹಿಸುವುದನ್ನು ಹೊರತುಪಡಿಸಿದರೆ, ಅವರು ಬಹುತೇಕ ಸಮಯವನ್ನು ಆಡಳಿತದ ವಿಷಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ನೇರವಾಗಿ ಏನನ್ನೂ ಹೇಳಲಾರದೆ ಇರುವ ದೌರ್ಬಲ್ಯವನ್ನು ಹೊರತುಪಡಿಸಿದರೆ, ಡಾ.ಸಿಂಗ್ ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಕೂಡಾ ಒಬ್ಬರು. ಅವರು ನಿರ್ಮಿಸಿದ ಸೌಧದಲ್ಲಿ ಆಸೀನರಾಗಿರುವ ಇಂದಿನ ನಕಲಿ ಶಾಮಣ್ಣರಿಗೆ ದೇಶದ ಇತಿಹಾಸ ಅಥವಾ ಅರ್ಥಶಾಸ್ತ್ರದ ಎ.ಬಿ.ಸಿ.ಡಿ.ಗೊತ್ತಿಲ್ಲ.
ಅವರಿಗೆ ಗೊತ್ತಿರುವುದು ರಾಮ ಮತ್ತು ಕೃಷ್ಣ ಹಾಗೂ ಕೊಚ್ಚು ಮತ್ತು ಕೊಲ್ಲು ಎಂಬ ಶಬ್ದಗಳು ಮಾತ್ರ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




