ಮಂಗಳೂರು: ಇಂದು ಭಾರತದ ಇತಿಹಾಸದಲ್ಲಿ ಸ್ಮರಣಾರ್ಹ ದಿನವಾಗಿದೆ. ಪ್ರಾದೇಶಿಕ ಭದ್ರತೆಯಾಗಿರಲಿ ಅಥವಾ ಆರ್ಥಿಕ ಭದ್ರತೆಯಾಗಿರಲಿ, ಭಾರತವು ಭಾರಿ ಅವಕಾಶಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳೂರಿನಲ್ಲಿ ಸುಮಾರು 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದ ಅವರು, ಈ ಯೋಜನೆಗಳು ಕರ್ನಾಟಕದಲ್ಲಿ ಸುಗಮ ಜೀವನ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ‘ಒಂದು ಜಿಲ್ಲೆ ಮತ್ತು ಒಂದು ಉತ್ಪನ್ನ’ ಯೋಜನೆಯು ಈ ಪ್ರದೇಶದ ಮೀನುಗಾರರು, ಕುಶಲಕರ್ಮಿಗಳು ಮತ್ತು ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ಲಭ್ಯತೆಯನ್ನು ಸುಗಮಗೊಳಿಸುತ್ತದೆ ಎಂದರು.
ನಾನು ಕೆಂಪುಕೋಟೆಯಿಂದ ಆಡಿದ ಐದು ಪ್ರತಿಜ್ಞೆಗಳಲ್ಲಿ ಮೊದಲನೆಯದು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣವಾಗಿದೆ. “ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, ದೇಶದ ಉತ್ಪಾದನಾ ವಲಯವನ್ನು ‘ಮೇಕ್ ಇನ್ ಇಂಡಿಯಾ’ವಾಗಿ ವಿಸ್ತರಿಸುವುದು ಬಹಳ ಅಗತ್ಯವಾಗಿದೆ”. ಇದು ಅಭಿವೃದ್ಧಿಯ ಪ್ರಮುಖ ಮಂತ್ರವಾಗಿದೆ. ಇಂತಹ ಪ್ರಯತ್ನಗಳ ಪರಿಣಾಮವಾಗಿ, ಕೇವಲ 8 ವರ್ಷಗಳಲ್ಲಿ ಭಾರತದ ಬಂದರುಗಳ ಸಾಮರ್ಥ್ಯವು ಬಹುತೇಕ ದ್ವಿಗುಣಗೊಂಡಿದೆ ಎಂದರು.
ಕರ್ನಾಟಕವು ಮೂಲ ಸೌಕರ್ಯ ಅಭಿವೃದ್ಧಿಯಿಂದ ಅಪಾರ ಪ್ರಯೋಜನವನ್ನು ಪಡೆದಿದೆ. “ಸಾಗರಮಾಲಾ ಯೋಜನೆಯ ಅತಿದೊಡ್ಡ ಫಲಾನುಭವಿಗಳಲ್ಲಿ ಕರ್ನಾಟಕವೂ ಒಂದಾಗಿದೆ”, ರಾಜ್ಯದಲ್ಲಿ ಕಳೆದ 8 ವರ್ಷಗಳಲ್ಲಿ 70 ಸಾವಿರ ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ. ಕಳೆದ 8 ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ರೈಲ್ವೆ ಬಜೆಟ್ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.
ದೇಶದಲ್ಲಿ ಬಡವರಿಗಾಗಿ 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಕರ್ನಾಟಕದಲ್ಲಿ, ಬಡವರಿಗಾಗಿ 8 ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳಿಗೆ ಅನುಮೋದನೆ ನೀಡಲಾಗಿದೆ. “ಸಾವಿರಾರು ಮಧ್ಯಮ ವರ್ಗದ ಕುಟುಂಬಗಳಿಗೂ ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳಲು ಕೋಟ್ಯಂತರ ರೂಪಾಯಿಗಳ ನೆರವು ಒದಗಿಸಲಾಗಿದೆ” ಎಂದರು.
ಜಲ ಜೀವನ್ ಅಭಿಯಾನದ ಅಡಿಯಲ್ಲಿ, ದೇಶದ 6 ಕೋಟಿಗೂ ಹೆಚ್ಚು ಕುಟುಂಬಗಳು ಕೇವಲ 3 ವರ್ಷಗಳಲ್ಲಿ ಕೊಳವೆ ನೀರಿನ ಸಂಪರ್ಕ ಪಡೆದಿವೆ. “ಕರ್ನಾಟಕದ ಗ್ರಾಮೀಣ ಕುಟುಂಬಗಳಿಗೆ ಮೊದಲ ಬಾರಿಗೆ 30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊಳವೆ ಮೂಲಕ ನೀರು ತಲುಪಿದೆ” ಎಂದರು.
ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶದ ಸುಮಾರು 4 ಕೋಟಿ ಬಡ ರೋಗಿಗಳು ಆಸ್ಪತ್ರೆ ದಾಖಲಾತಿ ವೇಳೆ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಕಾರಣಕ್ಕಾಗಿ, ಬಡವರು ಖರ್ಚು ಮಾಡಬೇಕಾಗಿದ್ದ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ರೋಗಿಗಳು ಆಯುಷ್ಮಾನ್ ಭಾರತದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದರು.
ದುರ್ಬಲ ಆರ್ಥಿಕ ಪರಿಸ್ಥಿತಿಗಳಿಂದಾಗಿ ಮರೆತುಹೋದವರು ನಿರ್ಲಕ್ಷಿತರಾಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಮೀನುಗಾರರು, ಬೀದಿಬದಿ ವ್ಯಾಪಾರಿಗಳು ಮತ್ತು ಅಂತಹ ಕೋಟ್ಯಂತರ ಜನರು ಮೊದಲ ಬಾರಿಗೆ ದೇಶದ ಅಭಿವೃದ್ಧಿಯ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅವರು ಭಾರತದ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ ಎಂದರು.
ದೇಶದಲ್ಲಿ ಏಳೂವರೆ ಸಾವಿರ ಕಿಮಿ ಕರಾವಳಿ ಇದೆ. ಈ ಸಾಮರ್ಥ್ಯದ ಸಂಪೂರ್ಣ ಪ್ರಯೋಜನವನ್ನು ನಾವು ಪಡೆದುಕೊಳ್ಳಬೇಕು. ಪ್ರವಾಸೋದ್ಯಮ ಬೆಳೆದಾಗ, ಅದು ನಮ್ಮ ಗುಡಿ ಕೈಗಾರಿಕೆಗಳು, ನಮ್ಮ ಕುಶಲಕರ್ಮಿಗಳು, ಗ್ರಾಮೋದ್ಯೋಗ, ಬೀದಿಬದಿ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಮೊದಲಾದವರಿಗೆ ಉಪಯುಕ್ತವಾಗುತ್ತದೆ. ನವಮಂಗಳೂರು ಬಂದರು ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಿರಂತರವಾಗಿ ಹೊಸ ಸೌಲಭ್ಯಗಳನ್ನು ಸೇರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಇಂದು ಡಿಜಿಟಲ್ ಪಾವತಿಗಳು ಐತಿಹಾಸಿಕ ಮಟ್ಟದಲ್ಲಿವೆ ಮತ್ತು ಭೀಮ್-ಯುಪಿಐನಂತಹ ನಮ್ಮ ಆವಿಷ್ಕಾರಗಳು ವಿಶ್ವದ ಗಮನವನ್ನು ಸೆಳೆಯುತ್ತಿವೆ. ಇಂದು, ದೇಶದ ಜನರು ಬಲಿಷ್ಠ ಸಂಪರ್ಕದೊಂದಿಗೆ ವೇಗದ ಮತ್ತು ಅಗ್ಗದ ಇಂಟರ್ನೆಟ್ ಅನ್ನು ಬಯಸುತ್ತಾರೆ. ಇಂದು, ಸುಮಾರು 6 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸುವ ಮೂಲಕ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಲಾಗುತ್ತಿದೆ. “5ಜಿ ಸೌಲಭ್ಯವು ಈ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ. ಕರ್ನಾಟಕ ಸರ್ಕಾರವು ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ವರಿತವಾಗಿ ಪೂರೈಸಲು ಶ್ರಮಿಸುತ್ತಿರುವುದು ತಮಗೆ ಹರ್ಷವೆನಿಸಿದೆ” ಎಂದರು.
ಕೊರೊನಾ ಅವಧಿಯಲ್ಲಿ ಭಾರತ ಕೈಗೊಂಡ ನೀತಿಗಳು ಮತ್ತು ಕೈಗೊಂಡ ನಿರ್ಧಾರಗಳು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಳೆದ ವರ್ಷ, ಅನೇಕ ಜಾಗತಿಕ ಅಡೆತಡೆಗಳ ಹೊರತಾಗಿಯೂ, ಭಾರತದ ರಫ್ತು ಒಟ್ಟು 670 ಶತಕೋಟಿ ಡಾಲರ್ ಅಂದರೆ 50 ಲಕ್ಷ ಕೋಟಿ ರೂ. ಆಗಿತ್ತು. ಪ್ರತಿಯೊಂದು ಸವಾಲನ್ನು ಮೆಟ್ಟಿನಿಂತು ಭಾರತವು 418 ಶತಕೋಟಿ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿಗಳ ಸರಕು ರಫ್ತು ಮಾಡಿ ಹೊಸ ದಾಖಲೆ ನಿರ್ಮಿಸಿದೆ ಎಂದರು.
ದೇಶದ ಬೆಳವಣಿಗೆಯ ಚಾಲಕಶಕ್ತಿಯಾದ ಪ್ರತಿಯೊಂದು ವಲಯವೂ ಇಂದು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೇವಾ ವಲಯವು ಸಹ ತ್ವರಿತ ಬೆಳವಣಿಗೆಯತ್ತ ಸಾಗುತ್ತಿದೆ. ಪಿಎಲ್ ಐ ಯೋಜನೆಗಳ ಪರಿಣಾಮವನ್ನು ಉತ್ಪಾದನಾ ವಲಯದಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು ಎಂದರು.
ಮೊಬೈಲ್ ಫೋನ್ ಗಳು ಸೇರಿದಂತೆ ಇಡೀ ವಿದ್ಯುನ್ಮಾನ ಉತ್ಪಾದನಾ ವಲಯವು ಅನೇಕ ಪಟ್ಟು ಬೆಳೆದಿದೆ. ಭಾರತದಲ್ಲಿ 3 ವರ್ಷಗಳಲ್ಲಿ ಆಟಿಕೆಗಳ ಆಮದು ಕಡಿಮೆಯಾಗಿದೆ ಮತ್ತು ರಫ್ತು ಬಹುತೇಕ ಹೆಚ್ಚಾಗಿದೆ. ಭಾರತೀಯ ಸರಕುಗಳನ್ನು ರಫ್ತು ಮಾಡಲು ತಮ್ಮ ಸಂಪನ್ಮೂಲಗಳನ್ನು ಒದಗಿಸುವ ಮಂಗಳೂರಿನಂತಹ ಪ್ರಮುಖ ಬಂದರುಗಳನ್ನು ಹೊಂದಿರುವ ದೇಶದ ಕರಾವಳಿ ಪ್ರದೇಶಗಳಿಂದ ಇದು ನೇರವಾಗಿ ಪ್ರಯೋಜನ ಪಡೆಯುತ್ತಿವೆ ಎಂದರು.
ಸರ್ಕಾರದ ಪ್ರಯತ್ನಗಳೊಂದಿಗೆ, ದೇಶವು ಕೆಲವು ವರ್ಷಗಳಲ್ಲಿ ಕರಾವಳಿ ಸಂಚಾರದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ದೇಶದ ವಿವಿಧ ಬಂದರುಗಳಲ್ಲಿ ಹೆಚ್ಚಿದ ಸೌಲಭ್ಯಗಳು ಮತ್ತು ಸಂಪನ್ಮೂಲಗಳಿಂದಾಗಿ, ಕರಾವಳಿ ಆಂದೋಲನವು ಈಗ ಸುಲಭವಾಗಿದೆ ಎಂದರು.
ಬಂದರು ಸಂಪರ್ಕವು ಉತ್ತಮವಾಗಿರಬೇಕು, ಅದನ್ನು ತ್ವರಿತಗೊಳಿಸಬೇಕು ಎಂಬುದು ಸರ್ಕಾರದ ಪ್ರಯತ್ನವಾಗಿದೆ. ಆದ್ದರಿಂದ, ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ, ರೈಲ್ವೆ ಮತ್ತು ರಸ್ತೆಗಳ ಇನ್ನೂರೈವತ್ತಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದ್ದು, ಇದು ತಡೆರಹಿತ ಬಂದರು ಸಂಪರ್ಕಕ್ಕೆ ನೆರವಾಗುತ್ತದೆ ಎಂದರು.
ಗುಲಾಮಗಿರಿಯ ಕಪಿಮುಷ್ಟಿಯಿಂದ ಭಾರತದ ನೆಲವನ್ನು ರಕ್ಷಿಸಲು ರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾದೇವಿ ಮಾಡಿದ ಹೋರಾಟಗಳನ್ನು ಸ್ಮರಿಸಿದ ಅವರು, ಇಂದು, ಈ ಧೈರ್ಯಶಾಲಿ ಮಹಿಳೆಯರು ರಫ್ತು ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ಭಾರತಕ್ಕೆ ದೊಡ್ಡ ಸ್ಫೂರ್ತಿಯಾಗಿದ್ದಾರೆ ಎಂದರು.
ದೇಶಭಕ್ತಿಯ, ರಾಷ್ಟ್ರೀಯ ಸಂಕಲ್ಪದ ಈ ಶಕ್ತಿಯಿಂದ ನಾನು ಸದಾ ಪ್ರೇರೇಪಿತನಾಗಿದ್ದೇನೆ. ಮಂಗಳೂರಿನಲ್ಲಿ ಕಂಡುಬರುವ ಈ ಶಕ್ತಿಯು ಅಂತಹ ಅಭಿವೃದ್ಧಿಯ ಪಥವನ್ನು ಉಜ್ವಲಗೊಳಿಸುವುದನ್ನು ಮುಂದುವರಿಸಲಿ, ಅದೇ ಆಶಯದೊಂದಿಗೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು ಎಂದರು.
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೊವಾಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಸಹಾಯಕ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್, ಶಂತನು ಠಾಕೂರ್ ಮತ್ತು ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯದ ಸಚಿವರಾದ ಅಂಗಾರ ಎಸ್, ಸುನಿಲ್ ಕುಮಾರ್ ವಿ ಮತ್ತು ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



