ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹೆಂಡತಿಯನ್ನೇ ಕೊಲೆಗೈದ ಗಂಡ

6 months ago

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದ ಪತ್ನಿಯನ್ನು ರೊಚ್ಚಿಗೆದ್ದು ಪತಿಯೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ದುರ್ಘಟನೆ ಆಲ್ದೂರು ಬಳಿಯ ಹವ್ವಳ್ಳಿಯಲ್ಲಿ ನಡೆದಿದೆ. ಹವ್ವಳ್ಳಿ ಗ್ರಾಮದ ನೇತ್ರಾವತಿ(34) ಕೊಲೆಯಾದವರು,ಕೃತ್ಯ ನಡೆಸಿದ ಸಕಲೇಶಪುರ ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 5 ತಿಂಗಳ ಹಿಂದೆ ನೇತ್ರಾವತಿ ಹಾಗೂ ನವೀನ್ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲ‌‌ ದಿನಗಳಲ್ಲಿ ಪತಿಯಿಂದ ದೂರವಾಗಿ ನೇತ್ರಾವತಿ, ತನ್ನ ಹವ್ವಳ್ಳಿ ಗ್ರಾಮದ ತವರು ಮನೆ ಸೇರಿದ್ದರು.

ಎರಡು  ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಪತಿ ನವೀನ್ ನಿಂದ‌ ಸಂಪೂರ್ಣ ‌ದೂರವಾಗುವ ಯೋಚನೆ ಮಾಡಿದ್ದ ನೇತ್ರಾವತಿ ವಿಚ್ಛೇದನ ನೀಡಲು ಸಿದ್ದತೆ ನಡೆಸಿದ್ದರು.

ಮೂರು ದಿನಗಳ‌ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪತಿ‌ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸಿದ್ದರು. ವಿಚ್ಛೇದನ ಮತ್ತು ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದ ಪತಿ ನವೀನ್ ಪತ್ನಿ ನೇತ್ರಾವತಿಯ ಕೊಲೆಮಾಡಿದ್ದಾನೆ.

ಆಲ್ದೂರು ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿರುವ ವಿಷಯ ತಿಳಿದ ನವೀನ್ ಸಕಲೇಶಪುರದಿಂದ ಆಲ್ದೂರು ಪಟ್ಟಣಕ್ಕೆ ಬಂದಿದ್ದ. ಆಲ್ದೂರಿನಿಂದ‌ ಎರಡು ಕಿಮೀ ದೂರದಲ್ಲಿರುವ ಹವ್ವಳ್ಳಿ ಗ್ರಾಮದ ನೇತ್ರಾವತಿ ಮನೆಗೆ ಹಿಂಭಾಗದಿಂದ ತೆರಳಿದ್ದ.

ಮನೆಯ ಹಿಂಭಾಗದಲ್ಲಿ ಕೆಲಸ‌ಮಾಡುತ್ತಿದ್ದ ನೇತ್ರಾವತಿ ಮೇಲೆ ನವೀನ್ ‌ ಊರಿನಿಂದ ತನ್ನ ಜೊತೆಯಲ್ಲಿ ‌ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾವತಿ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Leave a Reply