ಇರುವ ಒಬ್ಬ ಮಗನಿಗೆ ಎಷ್ಟು ಅಂತ ಆಸ್ತಿ ಮಾಡುತ್ತೀರಾ?: ಎಚ್.ವಿಶ್ವನಾಥ್

2 years ago

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬಂದಿರುವ ಅಕ್ರಮ ಸೈಟುಗಳನ್ನು ಮುಡಾಕ್ಕೆ ಮರಳಿಸಬೇಕು ಹಾಗೂ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಹೋಗಿಬಿಟ್ಟ. ಇರೋ ಇನ್ನೊಬ್ಬ ಮಗನಿಗೆ ಎಷ್ಟು ಅಂತ ಆಸ್ತಿ ಮಾಡುತ್ತೀರಾ? ಹಗರಣಗಳ ಆರೋಪದಡಿ ನೀವು ಉಟ್ಟಿರುವ ಬಿಳಿ ಪಂಚೆ ಕಪ್ಪಾಗುವುದಕ್ಕೆ ಮುನ್ನವೇ ನೀವು ಮುಡಾ ಸೈಟುಗಳನ್ನು ಮುಡಾಕ್ಕೆ ಹಿಂದಿರುಗಿಸಿ ಎಂದು ಸಲಹೆ ನೀಡಿದರು.

ಪರ್ಯಾಯ ನಿವೇಶನ ಪಡೆದಿರುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ನೀವು ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟುಬಿಡಿ. ಇಲ್ಲವಾದರೆ, ನಿಮಗೆ ಈಗ ಬಂದಿರುವ ಕೆಟ್ಟ ಹೆಸರು ಶಾಶ್ವತವಾಗಿ ಅಂಟಿಕೊಳ್ಳಲಿದೆ ಎಂದರು.

ನೀವು ಸಮಾಜವಾದಿ ಮೌಲ್ಯಗಳನ್ನು ಪ್ರತಿಪಾದಿಸಿದ್ದೀರಿ. ನಿಮ್ಮ ರಾಜಕೀಯ ಜೀವನದ್ದುದ್ದಕ್ಕೂ ನೀವು ಹಾಗೆಯೇ ನಡೆದುಕೊಂಡು ಬಂದಿರುವ ಹೆಗ್ಗಳಿಕೆಯನ್ನು ಹೊಂದಿದ್ದೀರಿ. ಆದರೆ, ಈಗ ಮುಡಾ ಹಗರಣದಲ್ಲಿ ನಿಮ್ಮ ಕುಟುಂಬದ ಹೆಸರು ಕೇಳಿಬಂದಿದ್ದು, ನೀವು ತಪ್ಪೇ ಆಗಿಲ್ಲ ಎಂದು ವಾದಿಸುತ್ತಿದ್ದೀರಿ. ಆದರೆ, ನಿಮ್ಮ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ ಎಂದರು.

Leave a Reply