ಬೆಂಗಳೂರು: ಮೇಲ್ಮೈ ಸುಳಿಗಾಳಿ ಮತ್ತು ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯು ಭಾರ ಕುಸಿತದ ಪರಿಣಾಮ ಕರ್ನಾಟಕದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಗುಡುಗು ಸಹಿತ ಸುರಿಯುತ್ತಿರುವ ಬಿರುಗಾಳಿ ಮಳೆಗೆ ಹಲವಡೆ ಮರಗಳು ಉರುಳಿ ಬಿದ್ದಿದ್ದರೆ, ಬಹುತೇಕ ಕಡೆ ಬೆಳೆದು ನಿಂತಿರುವ ಫಸಲು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನಷ್ಟವಾಗಿದೆ.
ಬೆಂಗಳೂರು, ಮೈಸೂರು, ತುಮಕೂರು, ಹಾವೇರಿ, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಭಾರೀ ಅಮಾಂತರ ಸೃಷ್ಟಿಸಿದೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಇದೇ ರೀತಿಯ ವಾತಾವರಣ ಇರಬಹುದು ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರದಲ್ಲಿ ಈ ಅತಿ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಹಾವೇರಿ, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದ್ದು ಇಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರಿನಲ್ಲಂತೂ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಯಲಹಂಕದ ಜಕ್ಕೂರು ರಸ್ತೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಸುರಭಿ ಲೇಔಟ್ ಮುಳುಗಿ ಹೋಗಿದೆ. ಆ ಬಡಾವಣೆಗೆ ತೆರಳುವ ಸರ್. ಎಂವಿ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ನಿಂತಿದೆ. ಜಕ್ಕೂರು ಕೆರೆಗೆ ಹರಿಯಬೇಕಿದ್ದ ಯಲಹಂಕ ಕೆರೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಸುರಭಿ ಲೇಔಟ್ಗೆ ಜಲದಿಗ್ಬಂಧನ ವಿಧಿಸಿದಂತಾಗಿದೆ.
ಸರ್ಜಾಪುರ ರಸ್ತೆಯಲ್ಲಿ ಉಕ್ಕುತ್ತಿರುವ ನೀರು: ಸರ್ಜಾಪುರ ಸಮೀಪದ ನಡುರಸ್ತೆಯಲ್ಲಿ ಬುಗ್ಗೆ ರೀತಿ ನೀರು ಉಕ್ಕಿ ಹರಿಯುತ್ತಿರುವುದು ಕಂಡುಬಂದಿದೆ. ವಿಪ್ರೋ ಜಂಕ್ಷನ್ ಮತ್ತು ಆರ್ಬಿಡಿ ಲೇಔಟ್ ಜಂಕ್ಷನ್ ಕೂಡ ಜಲಾವೃತವಾಗಿದೆ.
ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟೆಂಟ್ ಮತ್ತೆ ಮುಳುಗಡೆಯಾಗಿದ್ದು ಸ್ಥಳದಲ್ಲಿ ಎನ್ಡಿಆರ್ಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. 35ಕ್ಕೂ ಹೆಚ್ಚು ಎನ್ಡಿಆರ್ಎಫ್ ಸಿಬ್ಬಂದಿ ಬೋಟಿಂಗ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಳುಗಡೆಯಾಗಿರುವ ಅಪಾರ್ಟ್ಮೆಂಟ್ನಲ್ಲಿರುವ 2,500 ಜನರನ್ನು ಎನ್ಡಿಆರ್ಎಫ್ ಸಿಬ್ಬಂದಿ ಬೋಟ್ಗಳ ಮೂಲಕ ಹೊರತಂದಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ 10 ಅಡಿಗೂ ಹೆಚ್ಚು ನೀರು ನಿಂತಿದೆ. ಅಷ್ಟು ನೀರನ್ನು ತೆರವು ಮಾಡುವುದಕ್ಕೆ ನಾಲ್ಕೈದು ದಿನ ಬೇಕಾಗಿರುವುದರಿಂದ ಒಂದು ವಾರ ಅಪಾರ್ಟ್ಮೆಂಟ್ನ್ನು ಸೀಲ್ ಮಾಡಲು ನಿರ್ಧರಿಸಲಾಗಿದೆ. ರಸ್ತೆಗಳೆಲ್ಲ ಅಕ್ಷರಶಃ ಹೊಳೆಯಂತಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳ ನೆಲ ಅಂತಸ್ತು ಮುಕ್ಕಾಲು ಭಾಗ ಮುಳುಗಿದೆ.
ಟಾಟಾ ಲೇಔಟ್ನಲ್ಲಿ ಸುಮಾರು 600 ಮನೆಗಳಿಗೆ ನೀರು ನುಗ್ಗಿದೆ. ಹೆಚ್ಚೂ ಕಡಿಮೆ ಎಲ್ಲ ಮನೆಗಳಲ್ಲೂ ಎರಡು ಅಡಿಗಿಂತ ಹೆಚ್ಚು ನೀರು ನಿಂತಿದೆ. ಅಪಾರ್ಟ್ಮೆಂಟ್ಗಳ ಸ್ಥಿತಿ ಕೇಳುವಂತಿಲ್ಲ. ಟಾಟಾ ಲೇಔಟ್ ಎದುರಿಗಿರುವ ಬಾಲಾಜಿ ಲೇಔಟ್ ಕಥೆಯೂ ಭಿನ್ನವಾಗಿಲ್ಲ. ಅಲ್ಲೂ ಮನೆಗಳಿಗೆ ಜಲದಿಗ್ಭಂಧನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಕೃತಿ ವಿಕೋಪದಿಂದ ಬಿದ್ದಿರುವ ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ. ಪರಿಹಾರ ನೀಡುತ್ತೇವೆ ಎಂದರು
ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಳೆ ಹಾನಿ ಕುರಿತು ವರದಿ ಪಡೆದರು.ಅಗತ್ಯವಿರುವ ಕಡೆ ತುರ್ತು ಪರಿಹಾರ ಕಾಮಗಾರಿಗಳನ್ನು ಆರಂಭಿಸುವಂತೆ ಸೂಚಿಸಿದ ಸಚಿವರು ನದಿ ಪಾತ್ರದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದರು.
ಗ್ರಾಮಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಳೆ ಹಾನಿ ಕುರಿತಂತೆ ಕ್ಷಣ ಕ್ಷಣದ ವರದಿ ಪಡೆದುಕೊಂಡು ಅದಕ್ಕೆ ತಕ್ಕಂತೆ ಪರಿಹಾರ ಯೋಜನೆಗಳನ್ನು ರೂಪಿಸಬೇಕು. ಜಿಲ್ಲಾಧಿಕಾರಿಗಳ ಬಳಿಯಲ್ಲಿ ಇರುವ ತುರ್ತು ನಿಧಿಯನ್ನು ಇದಕ್ಕೆ ಬಳಸುವಂತೆ ಸೂಚಿಸಿದರು.




