ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಅವರನ್ನು ಗೆಲ್ಲಿಸಿ: ಸಿದ್ದರಾಮಯ್ಯ

2 years ago

ಮೈಸೂರು: ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ವರುಣಾದ ಜನರಿಂದ ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ಈಗಲೂ ನನಗೆ ಮತ ನೀಡುತ್ತಿರುವುದು ಎಂದು ಭಾವಿಸಿ ನಮ್ಮ ಅಭ್ಯರ್ಥಿಗೆ ಮತ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಅವರನ್ನು ಗೆಲ್ಲಿಸಿ, ಬಿಜೆಪಿಯ ಸುಳ್ಳುಗಳನ್ನು ಸೋಲಿಸಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ. ಮೈಸೂರು-ಚಾಮರಾಜನಗರ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾನು ಇನ್ನಷ್ಟು ಗಟ್ಟಿಯಾಗಿ, ನನ್ನ ರಾಜಕೀಯ ಶಕ್ತಿಯೂ ಹೆಚ್ಚುತ್ತದೆ. ಇದಕ್ಕೆ ನೀವೆಲ್ಲರೂ ಬೆಂಬಲಿಸಬೇಕು ಎಂದರು.

ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ‌ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ.  ಪುರುಷರ ಹಣವೂ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದಿದ್ದಾರಾ? ದೇಶದ ಜನರಿಗಾಗಿ ಏನೂ ಕಾರ್ಯಕ್ರಮ ರೂಪಿಸದೆ ಕೇವಲ ಅಚ್ಛೆ ದಿನ್ ಆಯೆಗಾ ಎಂದು ಡೈಲಾಗ್ ಹೊಡೆದರೆ ಸಾಕಾ? ಡೈಲಾಗ್ ನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ, ರಸಗೊಬ್ಬರ ಬೆಲೆ ಕಡಿಮೆ ಆಗತ್ತಾ? ಬರೀ ಬಾಯಲ್ಲಿ ಡೈಲಾಗ್ ಹೊಡೆದರೆ ಜನರ ಬದುಕಿನ ಸಂಕಷ್ಟ ಕಡಿಮೆ ಆಗ್ತದಾ? ಎಂದು ಪ್ರಶ್ನಿಸಿದರು.

56 ಇಂಚಿನ ಖಾಲಿ ಎದೆ ಇದ್ದರೆ ಸಾಲದು, ಅದರೊಳಗೆ ಮಾತೃ ಹೃದಯ ಇರಬೇಕು. ಇಲ್ಲದಿದ್ದರೆ ಹೀಗೇ ಆಗೋದು. ಉದ್ಯೋಗ ಸೃಷ್ಟಿ‌ ಆಗೋದಿಲ್ಲ. ರೈತರ ಆದಾಯವೂ ದುಪ್ಪಟ್ಟಾಗುವುದಿಲ್ಲ ಎಂದರು.

ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ಬಸವ ಜಯಂತಿ ದಿನ. ಎರಡನೇ ಬಾರಿ ಸಿಎಂ ಆಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆವು. ಬಸವಣ್ಣನವರು ಲಿಂಗಾಯತ ಧರ್ಮ‌ ಸ್ಥಾಪಿಸಿ ಮನುಷ್ಯ ಧರ್ಮದ ಏಳಿಗೆಗೆ ಮುಂದಾದರು. ಬಸವಾದಿ ಶರಣರು ಒಂದು ಜಾತಿ-ಧರ್ಮಕ್ಕೆ ಸೇರಿದವರಲ್ಲ. ನಾವು ಬಸವಾದಿ ಶರಣರ ಆಶಯದಂತೆ ಕಾಯಕ ಮತ್ತು ದಾಸೋಹ ಮೌಲ್ಯದಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.

Leave a Reply