ನಾಗಠಾಣ: ‘ಮತವನ್ನು ಯಾರಿಗೆ ಮಾಡಿದರೆ ಸತ್ಪಾತ್ರಕ್ಕೆ ಸಲ್ಲುತ್ತದೆ ಎಂದು ಯೋಚನೆ ಮಾಡಿ’ ಎಂದು ನಾಗಠಾಣ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.
ಮಂಗಳವಾರ ಇಂಗನಾಳ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರ ಬಗ್ಗೆ ಕಾಳಜಿ ಇರುವ ಮತ್ತು ಜನಪರವಾದ ಸರಕಾರ ಬರಲು ತಾವು ಕಾಂಗ್ರೆಸ್ಗೆ ಮತ ನೀಡಿ ನೀವುಗಳು ನಿಮ್ಮ ಮತವನ್ನು ಸತ್ಪಾತ್ರಕ್ಕೆ ಸಲ್ಲುವಂತೆ ಮಾಡಿ ಎಂದು ಮನವಿ ಮಾಡಿದರು.
ರೈತರಿಗೆ ಸರಿಯಾದ ಬೆಲೆ ಇಲ್ಲ. ಅವರ ಬದುಕು ದುಸ್ತರವಾಗಿದೆ. ನಾವು ಹೋರಾಟ ಮಾಡಿ ನಮ್ಮ ಹಕ್ಕು ಪಡೆವ ಸ್ಥಿತಿ ಇದೆ. ರೈತ ತನಗಿಷ್ಟು ನೀರು ಕೊಡಿ ಅಂತ ಕೇಳುವುದು ಬಿಟ್ಟು ಏನನ್ನೂ ಬಯಸುವುದಿಲ್ಲ. ಆತ ನೀರಿಗಾಗಿಯೂ ಬಡಿದಾಡುವಂತಿದೆ. ನಾಗಠಾಣ ಕ್ಷೇತ್ರ ಸಂಪೂರ್ಣ ನೀರಾವರಿ ಮಾಡಲು ಚಿಂತಿಸಿ ನಾನು ಚುನಾವಣೆಗೆ ನಿಂತಿದ್ದೇನೆ ಹೊರತು ಬೇರೆ ಯಾವ ವೈಯಕ್ತಿಕ ಹಿತಾಸಕ್ತಿ ನನಗಿಲ್ಲ. ಎಂ.ಬಿ. ಪಾಟೀಲರು ಬೆನ್ನಿಗಿರುವುದರಿಂದ ನಮ್ಮದೇ ಸರಕಾರ ಬಂದರೆ ಈ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಮೂಲ ಸೌಕರ್ಯ ಸೇರಿ ಎಲ್ಲ ಬಗೆಯಲ್ಲೂ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ. ಮೊದಲು ಶಾಸಕನಾಗಿದ್ದಾಗ ನಾನು ಮಾಡಿದ ರಸ್ತೆಗಳಷ್ಟೇ ರಸ್ತೆಗಳು. ಅವಕ್ಕೆ ಡಾಂಬರು ಕೂಡ ಹಾಕುವುದಾಗಿಲ್ಲ. ಕ್ಷೇತ್ರ ಹಾಳೆದ್ದು ಹೋಗಿದೆ. ಸುಧಾರಿಸಲು ನನಗೊಂದು ಅವಕಾಶ ಕೊಡಿ ಎಂದು ಕೇಳಿಕೊಂಡರು.
ಸಿಂಧೂರ ಸಾಹುಕಾರ ಕಟಿಗೇರಿ, ಮುದುಕಣ್ಣ, ಚಂದ್ರಶೇಖರ ಅರಕೇರಿ, ಸಿದ್ದು ಕಟಗೇರಿ, ಪರಶು ವಾಲೀಕಾರ, ಯಲ್ಲಪ್ಪ ಪೂಜಾರಿ ಅನೇಕರಿದ್ದರು.



