ಬೆಂಗಳೂರು: ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಂದು ಕಮಿಷನ್ ಆರೋಪ ಕೇಳಿ ಬಂದಿದೆ. ಚುನಾವಣೆಗಾಗಿ ಸಂಪನ್ಮೂಲ ಕ್ರೋಡಿಕರಿಸಲು ಬಿಜೆಪಿ ಆಡಳಿತದ ಕೊನೆಯ ಹಂತದಲ್ಲಿ ಕೆಲವು ಪ್ರಮುಖ ಕಾಮಗಾರಿಗಳ ಗುತ್ತಿಗೆ ನೀಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಆತುರಾತುರವಾಗಿ ಕಾಮಗಾರಿಗಳನ್ನು ಗುತ್ತಿಗೆ ನೀಡುವ ನೆಪದಲ್ಲಿ ಬಿಜೆಪಿ ಸರ್ಕಾರ ಶೇ.50ರಷ್ಟು ಕಮಿಷನ್ ಪಡೆದಿದೆ ಎಂದು ದೂರಿದ್ದಾರೆ.
ಚುನಾವಣೆಗೆ ಮೂರು ತಿಂಗಳು ಇರುವಾಗ ಟೆಂಡರ್ ಕರೆಯಬಾರದು, ವರ್ಕ್ ಆರ್ಡರ್ ಕೊಡಬಾರದು ಇದನ್ನು ಪಾಲಿಸಬೇಕು ಎಂದು ನಾವು ಪದೇ ಪದೇ ಒತ್ತಾಯ ಮಾಡಿದ್ದೆವು. ಆದರೆ ಅದನ್ನು ಮೀರಿ ಬಿಜೆಪಿ ಚುನಾವಣೆಗಾಗಿ ಹಣ ತೆಗೆದುಕೊಂಡು ಕಾಮಗಾರಿ ಗುತ್ತಿಗೆ ನೀಡಿದ್ದಾರೆ. ಕೆಲವೆಡೆ ಕೆಲಸ ಶುರು ಮಾಡಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ ಗೆ ಲಾಭ: ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬಂದಿದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಶಕ್ತಿ ಹೆಚ್ಚಾಗಿದೆ. ವಿಧಾನಸಭಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಶೆಟ್ಟರ್ ಕೆಲಸ ಮಾಡಿದ್ದವರು, ಅವರ ಸೇರ್ಪಡೆಯಿಂದ ಸಹಜವಾಗಿಯೇ ನಮಗೆ ಅನುಕೂಲವಾಗಲಿದೆ ಎಂದರು.
ಶೆಟ್ಟರ್ ಸಂಘ ಪರಿವಾರದಲ್ಲಿ ಬೆಳೆದಿದ್ದರೂ ನಮ್ಮ ಪಕ್ಷಕ್ಕೆ ಬಂದ ಮೇಲೆ ಇಲ್ಲಿನ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತಾರೆ. ಕಾಂಗ್ರೆಸ್ ಸಿದ್ಧಾಂತ ಎಲ್ಲರಿಗೂ ಅವಕಾಶ ಸಿಗಬೇಕು, ಸಮಾನತೆ ಇರಬೇಕು ಎಂಬುದು, ಭ್ರಾತೃತ್ವ, ಸೌಹಾರ್ದತೆಯ ಸಿದ್ಧಾಂತ ಎಲ್ಲರೂ ಒಪ್ಪುವಂಥಾದ್ದು ಎಂದರು.
ಸಿದ್ಧರಾಮಯ್ಯ ಅವರು ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ಗೆ ಬಂದರು. ಈಗ ನಮ್ಮಲ್ಲೇ ಹೊಂದಿಕೊಂಡು ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಲ್ಲವೇ. ಅದೇ ರೀತಿ ಜಗದೀಶ್ ಶೆಟ್ಟರ್ ಕೂಡ ಹೊಂದಿಕೊಳ್ಳುತ್ತಾರೆ ಎಂದರು.



