ಹೃದಯ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಿ ಆರೋಗ್ಯವಂತರಾಗಿ: ಡಾ.ಎಸ್.ಎಸ್ ಅಯ್ಯಂಗಾರ್

1 year ago

ಬಳ್ಳಾರಿ: ಮನುಷ್ಯನ ಅವಯವಗಳಲ್ಲಿ ಹೃದಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೃದಯದ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸದೃಢ ಆರೋಗ್ಯ ಹೊಂದಬೇಕು ಎಂದು ಹಿರಿಯ ಹೃದಯ ತಜ್ಞ ಡಾ.ಎಸ್.ಎಸ್ ಅಯ್ಯಂಗಾರ್ ಹೇಳಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲೊಂದಾದ ಡಾ.ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯ ಅಂಗವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗ ಮತ್ತು ಟ್ರೆಕಾಗ್ ಸಂಸ್ಥೆಯ ಸಹಕಾರದೊಂದಿಗೆ ಹೃದಯ ಕಾಯಿಲೆ ಆರಂಭದಲ್ಲಿಯೇ ಗುರ್ತಿಸಲು ಬಳ್ಳಾರಿ ಹಬ್ ಒಳಗೊಂಡಂತೆ ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೊಸಪೇಟೆ, ಕುಷ್ಟಗಿ, ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಗಳ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೃದಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯಕೀಯ ಉಪಚಾರ ಪಡೆಯಬೇಕು. ಆರೋಗ್ಯವಂತ ಹೃದಯ ಕಾಪಾಡಿಕೊಂಡು ದೀರ್ಘಾಯುಷ್ಯ ಹೊಂದಲು ಜನತೆಗೆ ಕಾಳಜಿ ತೆಗೆದುಕೊಳ್ಳುವುದರ ಕುರಿತು ಜಾಗ್ರತೆ ನೀಡಬೇಕು ಎಂದರು.

ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳಾಗಿರುವ ನಿದ್ರಾಭಂಗ, ತೀವ್ರ ಉಸಿರಾಟದ ತೊಂದರೆ, ಬೆನ್ನು ಅಥವಾ ದೇಹದ ಮೇಲ್ಭಾಗದಲ್ಲಿ ಅಸ್ವಸ್ಥತೆ, ಎಡಗೈ ಸೇದುವುದು, ಕಾರಣವಿಲ್ಲದೆ ಬೆವರುವುದು, ವಾಕರಿಕೆ, ವಾಂತಿ ಮುಂತಾದವು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳಿಗೆ ಆಸ್ಪತ್ರೆಗೆ ದಾಖಲಿಸುವ ಕುರಿತು ತಿಳಿ ಹೇಳಬೇಕು. ಬಳ್ಳಾರಿ ಹೃದಯಾಲಯ ಹಬ್ ಆಸ್ಪತ್ರೆಗೆ ತಕ್ಷಣವೇ ವೈದ್ಯಕೀಯ ಉಪಚಾರದೊಂದಿಗೆ ಕಳುಹಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಮಾತನಾಡಿ, ಹೃದಯಘಾತ ಹಾಗೂ ಹೃದಯ ಸಂಬಂಧಿ ಇತರೆ ಕಾಯಿಲೆಗಳನ್ನು ಗ್ರಾಮೀಣ ಭಾಗದಲ್ಲಿಯೇ ಗುರ್ತಿಸಿ ಚಿಕಿತ್ಸೆ ನೀಡುವ ಮೂಲಕ ವ್ಯಕ್ತಿಯನ್ನು ಉಳಿಸುವ ಮೂಲಕ ಕುಟುಂಬದ ಸಂತಸ ಸದಾ ಇರುವಂತೆ ನೋಡಿಕೊಳ್ಳಬೇಕು ಎಂದರು.

ಡಾ.ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ ಆಯ್ಕೆಯಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯ ಸರ್ಕಾರ ಇತರೆ ತಾಲ್ಲೂಕುಗಳನ್ನು ಒಳಪಡಿಸುತ್ತಿದೆ ಎಂದರು.

ಯಾವುದೇ ಕಠಿಣ ಸಂದರ್ಭದಲ್ಲಿ ಸ್ಟಂಟ್ ಹಾಕುವ, ಅಗತ್ಯವಿದ್ದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ವ್ಯಕ್ತಿಯ ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ನೆರವೇರಿಸುವ ಮೂಲಕ ಕಡುಬಡ ಕುಟಂಬಗಳಿಗೆ ಆಸರೆಯಾಗಿ ಯೋಜನೆ ಅನುಷ್ಠಾನವಾಗುತ್ತಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಕಾರ್ಯಾಗಾರದಲ್ಲಿ ಹಿರಿಯ ಹೃದಯ ತಜ್ಞರಾದ  ಡಾ.ಸಿ.ಬಿ ಪಾಟೀಲ್, ಡಾ.ಮಧು ಜುಮ್ಲಾ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಎನ್ಸಿಡಿ ಸಲಹೆಗಾರರಾದ ಡಾ.ಜಬೀನಾ ತಾಜ್, ಹೃದಯ ಜ್ಯೋತಿ (ಟ್ರೆಕಾಗ್) ಯೋಜನೆಯ ವ್ಯವಸ್ಥಾಪಕ ಗೌತಮ್ ಸತ್ಯಪ್ರೇಮ್ ಹಾಗೂ ಶೃತಿ, ಹನುಮಂತು, ಪ್ರದೀಪ್, ರವಿಕುಮಾರ್, ವಿಜಯಮಾಳಿ ಸೇರಿದಂತೆ ಮೂರು ಜಿಲ್ಲೆಯ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

Leave a Reply