ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ ಜನರ ಸಂಕಷ್ಟ ಪರಿಹರಿಸಿ

1 year ago

ಎಸ್ ಡಿ ಪಿ ಐ ಆಗ್ರಹ

ದಾವಣಗೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಜಾದ್ ನಗರ 9 ಮತ್ತು 12ನೇ ವಾರ್ಡ್ ಬ್ರಾಂಚ್ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಜನರ ಸಂಕಷ್ಟ ಪರಿಹರಿಸುವಂತೆ ಮನವಿ ಸಲ್ಲಿಸಲಾಯಿತು.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 12ನೇ ವಾರ್ಡ್ ಆಜಾದ್ ನಗರ ಮುಖ್ಯ ರಸ್ತೆಯಲ್ಲಿ 2021-22 ಸಾಲಿನ 15ನೇ ಹಣಕಾಸು ಆಯೋಗದ ಜನರಲ್ ಬೇಸಿಕ್ ಗ್ರಾಂಟ್ ನಲ್ಲಿ ಅಂದಾಜು 9 ಲಕ್ಷ ಹಣವನ್ನು ವಿನಿಯೋಗಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ ಇದು ಕಳೆದ 1 ವರ್ಷದಿಂದ ಕೆಟ್ಟಿರುವುದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ಇದನ್ನೇ ನಂಬಿಕೊಂಡಿದ್ದ ಸ್ಥಳೀಯರು ನಗರದ ಬೇರೆ ಬೇರೆ ಕಡೆ ಹೋಗಿ ಕುಡಿಯುವ ನೀರು ತರುವ ದುಸ್ಥಿತಿ ಎದುರಾಗಿದೆ ಎಂದು ಆಯುಕ್ತರಿಗೆ ಎಸ್ ಡಿ ಪಿ ಐ ಸದಸ್ಯರು ವಿವರಿಸಿದರು.

9 ಮತ್ತು 12ನೇ ವಾರ್ಡಿನ ಕಾರ್ಪೊರೇಟರ್ ಗಳು ತಮಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಲಕ್ಷ ಲಕ್ಷ ಸಾರ್ವಜನಿಕರ ತೆರಿಗೆ ಹಣವನ್ನು ವಿನಿಯೋಗಿಸಿ ನಿರ್ಮಿಸಿದ ಈ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಮತ್ತು ಜನರ ಸಂಕಷ್ಟದ ಬಗೆಗೆ ಮಾಹಿತಿಯೊಂದಿಗೆ ಆಯುಕ್ತರಿಗೆ ವಿವರಿಸಿ, ಶೀಘ್ರವಾಗಿ ಮುತುವರ್ಜಿ ವಹಿಸಿ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ನಿಯೋಗದಲ್ಲಿ ಆಜಾದ್ ನಗರ 9 ಮತ್ತು 12ನೇ ವಾರ್ಡಿನ ಬ್ರಾಂಚ್ ನ ಪದಾಧಿಕಾರಿಗಳು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್. ತಾಹೀರ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಏಜಾಜ್ ಅಹಮದ್ ಮೊದಲಾದವರು ಹಾಜರಿದ್ದರು.

Leave a Reply