ಶಿಕ್ಷಣ ಸಂಸ್ಥೆಗಳು ಉತ್ತಮ ಸಂಸ್ಕಾರ ನೀಡಲಿ: ಆರ್.ಎಸ್.ಮಾಲಗತ್ತಿ

3 months ago

ಕೆಂಭಾವಿ: ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ದೂರದೃಷ್ಟಿ ಇರಬೇಕೇ ವಿನಃ ವ್ಯಾಪಾರೀಕರಣ ಬುದ್ಧಿ ಇರಬಾರದು ಎಂದು ಗ್ರಾ.ಪಂ. ಸದಸ್ಯ ಆರ್.ಎಸ್.ಮಾಲಗತ್ತಿ ಹೇಳಿದರು.

ಇಲ್ಲಿಗೆ ಸಮೀಪದ ಮಾಲಗತ್ತಿಯ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರು ಮೌಲ್ಯಯುತ ಶಿಕ್ಷಣದ ಉದ್ದೇಶಗಳನ್ನು ಹೊಂದಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಕ್ಕಳ ಪರಿಪೂರ್ಣ ಬೆಳವಣಿಗೆಯಲ್ಲಿ ಶಿಕ್ಷಕರು, ಪೋಷಕರ ಜತೆಗೆ ಆಡಳಿತ ಮಂಡಳಿ ಪಾತ್ರ ಬಹಳ ಮತ್ತರವಾಗಿದೆ ಎಂದರು.

ಶಿಕ್ಷಣ ಸಂಸ್ಥೆಗಳು ಆರಂಭ­ವಾ­ಗುವಾಗ ಇರುವ ಉದ್ದೇಶ­ಗಳು ಮುಂದೆ ಉಳಿದುಕೊಳ್ಳುವುದಿಲ್ಲ.  ಅವು ವ್ಯಾಪಾರ ಕೇಂದ್ರಗಳಾಗಿ ಪರಿವ­ರ್ತನೆಯಾಗುತ್ತಿವೆ ಇದನ್ನು ತಡೆದು ಶಿಕ್ಷಣ ಸಮಾಜ‌ಸೇವೆ ಎಂದು ಭಾವಿಸಿ ಶಿಕ್ಷಣ ನೀಡಬೇಕು ಎಂದರು.‌

ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಬದುಕಿನ ಪಾಠಗಳನ್ನು ಹೇಳಿ ಕೊಡಬೇಕು. ಮಕ್ಕಳು ಸಂಸ್ಕೃತಿಯ ವಾರಸುದಾರರಾಗಲು ಕಲಿಸುವ ಮತ್ತು ಕಲಿಯುವ ಕೆಲಸಗಳು ಒಟ್ಟಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಸಿದ್ಧಾರ್ಥ ಶಿಕ್ಷಣ‌ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಮೆಚ್ಚುವಂತಹ ಕೆಲಸ  ಎಲ್ಲಾ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂದರು.

ಕರಡಕಲ್ ಶಾಖಾ ಮಠದ ಶಾಂತರುದ್ರಮುನಿ‌ ಸ್ವಾಮೀಜಿ, ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಭೀಮರಾಯ ನಾಟೇಕಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಅಬ್ದುಲ್ ಪಟೇಲ್, ಎಸ್.ಡಿಎಂಸಿ‌ ಅಧ್ಯಕ್ಷ ಸಣ್ಣಕ್ಕೆಪ್ಪ ಸಾಹುಕಾರ, ಭೀಮಣ್ಣ ದೊರೆ, ನಿಂಗಣ್ಣ ಸಾಹುಕಾರ, ಮಹಾರಾಯ ಸಾಹುಕಾರ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ , ವೆಂಕೋಬ ದೊರೆ, ನರಸಿಂಹ ನಾಯ್ಕೋಡಿ, ದೌಲತ್ ಪಟೇಲ್, ಸೂಗಣ್ಣ ಸಾಹುಕಾರ, ಗೊಲ್ಲಾಳಪ್ಪ ಕಿರದಳ್ಳಿ ಸೇರಿದಂತೆ ಹಲವರು ಹಾಜರಿದ್ದರು. ಮಲ್ಲು ಸಜ್ಜನ್ ನಿರೂಪಿಸಿದರು ಶ್ರೀಶೈಲ್ ಮ್ಯಾಗೇರಿ ವಂದಿಸಿದರು.

Leave a Reply