ಬೆಂಗಳೂರು: ನಮಗೆ ಪರಿಹಾರ ಬೇಡ ಶಾಂತಿ ಕೊಡಿಸಿ ಎಂದು ಸಿದ್ದರಾಮಯ್ಯ ಅವರು ನೀಡಿದ ಪರಿಹಾರ ಹಣವನ್ನು ಬೆಂಗಾವಲು ವಾಹನದ ಮೇಲೆಸೆದ ಮಹಿಳೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದು ಮೊದಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರ ಕಿವಿಗೆ ಕೇಳಬೇಕು. ಬಿಜೆಪಿ ನಾಯಕರಿಗೆ ಕೇಳಬೇಕು. ಯಾರು ರಾಜ್ಯದಲ್ಲಿ ಶಾಂತಿಗೆ ಭಂಗ ತರುತ್ತಿದ್ದಾರೆ ಅವರನ್ನು ಪ್ರಶ್ನಿಸಬೇಕು. ಇದು ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳಬೇಕು ಎಂದಿದ್ದಾರೆ.
ಯಾರೂ ಯಾವ ಧರ್ಮದಲ್ಲಿ ಹುಟ್ಟಬೇಕು ಅಂತಾ ಅರ್ಜಿ ಹಾಕಿರುವುದಿಲ್ಲ. ಆ ಮಹಿಳೆ ನೆಮ್ಮದಿ, ರಕ್ಷಣೆ ಕೇಳುವುದರಲ್ಲಿ ತಪ್ಪಿಲ್ಲ. ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನಬದ್ಧವಾಗಿ ರಾಜ್ಯದ ನಾಯಕತ್ವ ವಹಿಸಿರುವವರು ಮೊದಲು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಚಾಟಿ ಬೀಸಿದರು.
ಬೆಂಗಾವಲು ವಾಹನದ ಮೇಲೆ ಪರಿಹಾರ ಹಣ ಎಸೆದ ಮಹಿಳೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗೊಂಡಿದ್ದು ರಾಜ್ಯದ ಪ್ರಜ್ಞಾವಂತ ಜನರು ಮಹಿಳೆಗೆ ಧೈರ್ಯ ಹೇಳುತ್ತಿದ್ದು ನಮ್ಮ ರಾಜ್ಯದ ಸ್ಥಿತಿ ಯಾವ ಮಟ್ಟಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



