ಅಲ್ಪಸಂಖ್ಯಾತರ ಅಭಿಪ್ರಾಯ ಪರಿಗಣಿಸದಿರುವುದು  ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧ: ಅಪ್ಸರ್ ಕೊಡ್ಲಿಪೇಟೆ

1 year ago

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಮತ್ತು 2024ರ ಸಂಸದೀಯ ಚುನಾವಣೆಯ ಸಂದರ್ಭದಲ್ಲಿಯೂ ಅಲ್ಪಸಂಖ್ಯಾತ ಸಮುದಾಯವು ಬಲಿಷ್ಠ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ. ಆದಾಗ್ಯೂ, ರಾಜ್ಯದ ಬಜೆಟ್‌ ಸಂಯೋಜನೆಯಂತಹ ಪ್ರಮುಖ ತೀರ್ಮಾನ ಪ್ರಕ್ರಿಯೆಗಳಲ್ಲಿ ಅವರ ಅಭಿಪ್ರಾಯ ಮತ್ತು ಆಗ್ರಹಗಳನ್ನು ಪರಿಗಣಿಸದಿರುವುದು ಸಮಾನತೆ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಅಲ್ಪಸಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಭೆಗೆ ಅಲ್ಪಸಂಖ್ಯಾತ ಸಮುದಾಯದ ಸಚಿವರು ಮತ್ತು ಶಾಸಕರನ್ನು ಮಾತ್ರ ಆಹ್ವಾನಿಸಲಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಹಾಗೂ ಸಂಘ-ಸಂಸ್ಥೆಗಳ ಸ್ಪಷ್ಟ ಕಡೆಗಣನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸಮುದಾಯದ ಮುಖಂಡರು ಹಾಗೂ ಸಂಘಸಂಸ್ಥೆಗಳನ್ನು ಹೊರಗಿಟ್ಟು ನಡೆಸುವ ಈ ಸಭೆ ಕೇವಲ ಕಾಟಾಚಾರದ ಸಭೆ ಆಗಲಿದೆ ಎಂದರು.

ಸಮಯದಾಯದ ಬೇಕು-ಬೇಡಗಳ ಕುರಿತು ಸಮುದಾಯದ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಅಭಿಪ್ರಾಯ, ಅಹವಾಲುಗಳನ್ನು ಕೇಳಬೇಕಾಗಿರುವುದು ಮುಖ್ಯಮಂತ್ರಿಯವರ ಆದ್ಯ ಕರ್ತವ್ಯ. ಉಳಿದೆಲ್ಲ ಸಮುದಾಯಗಳ ಮುಖಂಡರು, ಸಂಘ-ಸಂಸ್ಥೆಗಳನ್ನು ಆಹ್ವಾನಿಸಿ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳನ್ನು ಕೈಬಿಟ್ಟಿರುವುದು ಸಮಾಜವಾದ, ಸಮಾನತೆಯ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿರುವ ಸಿದ್ದರಾಮಯ್ಯರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply