ಬೆಂಗಳೂರು: ಮಲೆನಾಡು ಭಾಗದ ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ.ಎಲ್. ಶಂಕರ್ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಮಲೆನಾಡು ಕರಾವಳಿ ಒಕ್ಕೂಟ ಆಗ್ರಹಿಸಿದೆ.
ಬೆಂಗಳೂರು ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ, ಕಾಂಗ್ರೆಸ್ ವಕ್ತಾರ, ಸುದೀರ್ ಮುರೋಳಿ, ಬಿ.ಎಲ್. ಶಂಕರ್ ಅವರು ಹಿರಿಯ ರಾಜಕಾರಣಿಯಾಗಿದ್ದು ಅವರು ಉತ್ತಮ ವಾಗ್ಮಿಯಾಗಿದ್ದು, ಈ ಹಿಂದೆ ಜನಮೆಚ್ಚುವ ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸುವ ಶಕ್ತಿಯನ್ನು ಬಿ.ಎಲ್.ಶಂಕರ್ ಹೊಂದಿದ್ದಾರೆ ಎಂದರು.
ಈಗಿರುವ ಮಲೆನಾಡು, ಕರಾವಳಿ ಭಾಗದ ಸಂಸದರಾದ ಶೋಭಾ ಕರಂದ್ಲಾಜೆ, ರಾಘವೇಂದ್ರ ಅವರು ಯಾವುದೇ ಸಮಸ್ಯೆಗಳನ್ನು ಕೇಂದ್ರದ ಗಮನ ಸಳೆದು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಸಮಸ್ಯೆಯನ್ನು ಕುರಿತಂತೆ ಸಮರ್ಥವಾಗಿ ಬಗೆಹರಿಸುವಲ್ಲಿ ವಿಫಲಗೊಂಡಿದ್ದಾರೆ. ಹಾಗಾಗಿ ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಕೇಂದ್ರದ ಮೇಲೆ ಒತ್ತಡ ತಂದು, ಗಮನ ಸೆಳೆದು ಬಗೆಹರಿಸಲು ಬಿ.ಎಲ್.ಶಂಕರ್ ಸಮರ್ಥ ವ್ಯಕ್ತಿ ಯಾಗಿದ್ದಾರೆ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಗೆ ಆಯ್ಕೆಯಾಗಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಲೆನಾಡು ಕರಾವಳಿ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅನೇಕ ಸಂದರ್ಭಗಳಲ್ಲಿ ಸರ್ಕಾರಗಳು ವಿಫಲಗೊಂಡಿವೆ. ಮಲೆನಾಡು ಕರಾವಳಿ ಭಾಗದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ತುಳುನಾಡು ಆಕಾಡೆಮಿ ಆಗುವ ಅವಶ್ಯಕತೆ ಇದೆ. ಜತೆಗೆ ಮಲೆನಾಡಿನಲ್ಲಿ ಆನೆಗಳ ಹಾವಳಿ ಸಮಸ್ಯೆಯಿಂದ ರೈತರು ನಲುಗಿ ಹೋಗಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕಾದರೆ ಬಿ.ಎಲ್.ಶಂಕರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದರು.
ಭಾರತದ ರಾಷ್ಟ್ರದ್ವಜ ಹಾರಿಸಿದರೆ ಅದನ್ನು ಸಿ.ಟಿ.ರವಿಯವರು ತಾಲಿಬಾನ್ ಧ್ವಜವೆಂದು ಹೇಳುವುದು ಸರಿಯಲ್ಲ. ಧ್ವರಜ ಹಾರಿಸುವ ವಿಚಾರ ಇಟ್ಟುಕೊಂಡು ಬಿಜೆಪಿಯವರು ಗಲಭೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಇದೇ ವೇಳೆ ಪ್ರಶ್ನಿಸಿದರು.
ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿ, ಕರಾವಳಿ ಮಲೆನಾಡು ಜನ ತಬ್ಬಲಿಯಾಗಿದ್ದಾರೆ. ಕಾನೂನು ರೂಪುಗೊಳ್ಳುವ ಸಂಸತ್ತಿನಲ್ಲಿ ನಮ್ಮ ಭಾಗದ ಸಮಸ್ಯೆಗಳನ್ನು ಅರಿತವರು ಇರಬೇಕು. ನಾವು ಜನರ ಸಮಸ್ಯೆಗೆ ಧ್ವನಿಯಾಗುತ್ತೇವೆ ಎನ್ನುವವರು ರಾಜ್ಯಸಭೆಗೆ ಆಯ್ಕೆಯಾಗಬೇಕು. ಅವರು ದೆಹಲಿಯಲ್ಲಿ ನಮ್ಮ ಧ್ವನಿಯಾಗಬೇಕು. ಎಂದರು.
ಮಲೆನಾಡು ಕರಾವಳಿ ಒಕ್ಕೂಟದ ನಾಗೇಶ್ ಅಸಗೋಡು, ನವೀನ್ ಕರುವಾನೆ ಮೊದಲಾದವರು ಹಾಜರಿದ್ದರು.



