ಔಷಧೀಯ ಸಸ್ಯ, ಗಿಡಮೂಲಿಕೆ ಬೆಳೆಯುವ ರೈತರಿಗೆ ಇ-ಮಾರುಕಟ್ಟೆ ವೇದಿಕೆ ಕಲ್ಪಿಸಿ: ಈಶ್ವರ್ ಖಂಡ್ರೆ

7 months ago

ಬೆಂಗಳೂರು: ಔಷಧೀಯ ಸಸ್ಯ ಮತ್ತು ಗಿಡಮೂಲಿಕೆ ಬೆಳೆಯುವ ರೈತರಿಗೆ ಇ-ಮಾರುಕಟ್ಟೆ ರೀತಿಯಲ್ಲಿ ಮಾರುಕಟ್ಟೆ ವೇದಿಕೆ ಕಲ್ಪಿಸಲು ಸಹಯೋಗ ಮತ್ತು ಸಹಕಾರ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ಚಿಂತನ ಮಂಥನದಲ್ಲಿ ಮಾತನಾಡಿದ ಅವರು, ಹಲವರು ಮಾಹಿತಿ ಕೊರತೆಯಿಂದ ಔಷಧೀಯ ಸಸ್ಯಗಳನ್ನು ಕಳೆ ಎಂದು ನಾಶ ಮಾಡುತ್ತಿದ್ದಾರೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ, ಗಿಡಮೂಲಿಕೆ ಸಂರಕ್ಷಿಸಲು ಅರಿವು ಮೂಡಿಸಬೇಕಿದೆ ಎಂದರು.

ಹಿಂದೆ ನಮ್ಮ ಪೂರ್ವಿಕರು ಮನೆಯ ಹಿತ್ತಲಲ್ಲಿ ಬೆಳೆದ ಗಿಡಮೂಲಿಕೆಗಳಿಂದ ಮನೆ ಮದ್ದು ಮಾಡುತ್ತಿದ್ದರು. ಭಾರತದ ಸನಾತನ ವೈದ್ಯಪದ್ಧತಿ ಆಯುರ್ವೇದದಲ್ಲಿ ನೂರಾರು ಬಗೆಯ ಔಷಧೀಯ ಸಸ್ಯ ಬಳಕೆ ಆಗುತ್ತದೆ. ಹೀಗಾಗಿ ಇಂತಹ ಸಸ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಔಷಧೀಯ ಸಸ್ಯಗಳಿಗೆ ಮಾರುಕಟ್ಟೆ ದೊರೆತರೆ ಅವುಗಳ ಸಂರಕ್ಷಣೆ ತನ್ನಿಂತಾನೇ ಆಗುತ್ತದೆ. ಗಿಡಮೂಲಿಕೆ, ಔಷಧೀಯ ಸಸ್ಯ ಮಾರಾಟ ಮಳಿಗೆ ತೆರೆಯಲು ಸಹಾಯಧನ ನೀಡಿಕೆ ಅಗತ್ಯವಿದ್ದಲ್ಲಿ, ಈ ಬಗ್ಗೆಯೂ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸುವ ಭರವಸೆ ನೀಡಿದರು.

ಪಶ್ಚಿಮ ಘಟ್ಟ ಅಪರೂಪದ ಸಸ್ಯಸಂಕುಲ, ಕೀಟ ಸಂಕುಲ ಹಾಗೂ ಪ್ರಾಣಿ ಸಂಕುಲ ತಾಣವಾಗಿರುವುದರ ಜೊತೆಗೆ ಜಾಗತಿಕ  ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿರುವ ಅಮೂಲ್ಯ ಹಸಿರು ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಇಂದು ಕುಡಿಯುವ ನೀರು, ತಿನ್ನುವ ಆಹಾರ ಅಷ್ಟೇಕೆ ಪ್ರಾಣವಾಯುವೂ ಕಲುಷಿತವಾಗುತ್ತಿದೆ. ಇತ್ತೀಚಿನ ಅಧ್ಯಯನ ತಾಯಿಯ ಎದೆಹಾಲಲ್ಲೂ ವಿಷವಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಇಂತಹ ಕಾಲಘಟ್ಟದಲ್ಲಿ ನಾವು ಆರೋಗ್ಯಪೂರ್ಣವಾಗಿರಲು ಇಂತಹ ಅಮೂಲ್ಯ ಸಸ್ಯ ಸಂಪತ್ತನ್ನು ಉಳಿಸುವ ಅಗತ್ಯವಿದೆ ಎಂದರು.

Leave a Reply