ಮಂಗಳೂರು: CPIM ಪಕ್ಷದ ಸದಸ್ಯರೂ ಕಾರ್ಮಿಕ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಂಟ್ವಾಳದ ಕಾ.ದೊಂಬಯ್ಯ ಮೂಲ್ಯ(65ವರ್ಷ)ರವರು ಇಂದು(14-04-2023) ಸಂಜೆ ಬಂಟ್ವಾಳ ಬೈಪಾಸ್ ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು.
ಬಂಟ್ವಾಳದ ಭಂಡಾರಿಬೆಟ್ಟು ನಿವಾಸಿಯಾಗಿದ್ದ ಕಾಂ. ದೊಂಬಯ್ಯ ಮೂಲ್ಯರವರು ಮಂಗಳೂರಿನ ಮರೋಳಿಯಲ್ಲಿರುವ ಕೆನರಾ ವರ್ಕ್ಸ್ ಶಾಪ್ ನಲ್ಲಿ ದೀರ್ಘ ಕಾಲ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ 5 ವರ್ಷಗಳ ಹಿಂದೆ ನಿವೃತ್ತರಾಗಿದ್ದರು.ತಮ್ಮ ದುಡಿಮೆಯ ಕಾಲಾವಧಿಯಲ್ಲಿ ಕಾರ್ಮಿಕರ ಸಂಕಷ್ಟವನ್ನು ಸ್ವತಃ ಅರಿತು ಕಾರ್ಮಿಕ ನಾಯಕರಾಗಿ ಬೆಳೆದರು.ಆ ಮೂಲಕ ಫ್ಯಾಕ್ಟರಿ ಕಮಿಟಿ ಕಾರ್ಯದರ್ಶಿಯಾಗಿ, ಮೋಟಾರ್ ಟ್ರಾನ್ಸ್ ಪೋರ್ಟ್ ಆಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ (ರಿ) CITU ಇದರ ಸದಸ್ಸರಾಗಿ, ನಂತರ ಅದರ ಪ್ರಮುಖ ಪದಾದಿಕಾರಿಯಾಗಿ ದುಡಿದು ಕಾರ್ಮಿಕ ವರ್ಗಕ್ಕೆ ನಾಯಕತ್ವ ನೀಡಿದರು. CITU ದ.ಕ ಜಿಲ್ಲಾ ಸಮಿತಿಯ ಸದಸ್ಯರಾಗಿ, ಕಮ್ಯೂನಿಸ್ಟ್ ಕಾರ್ಯಕರ್ತರಾಗಿ, ದುಡಿಯುವ ಜನತೆಯ ಮಧ್ಯೆ ಕೆಲಸ ನಿರ್ವಹಿಸಿರುವ ದೊಂಬಯ್ಯ ಮೂಲ್ಯರ ಅಗಲುವಿಕೆ ಕಾರ್ಮಿಕ ವರ್ಗದ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು CITU ದ. ಕ ಜಿಲ್ಲಾ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ.
ದೊಂಬಯ್ಯಾ ಮೂಲ್ಯರವರು ಮೂರು ಮಂದಿ ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




