ಹಿಂಡಲಗಾ ಜೈಲಿನಲ್ಲಿ ನನ್ನ ಕೊಲೆಗೆ ಸಂಚು: ಕೆ.ಎಸ್.ಈಶ್ವರಪ್ಪ

3 years ago

ಬೆಂಗಳೂರು: ಅಲ್ಪಸಂಖ್ಯಾತ ವಿರೋಧಿ ಹೇಳಿಕೆ ಹಾಗೂ ನಾಲಿಗೆ ಹರಿಬಿಡುವ ವಿಚಾರಕ್ಕೆ ಸಾಕಷ್ಟು ವಿವಾದಗಳಿಗೆ ಸಿಲುಕಿದ್ದ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಕೊಲೆ ಮಾಡಲು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಂಚು ರೂಪಿಸಲಾಗಿದೆಯಂತೆ. ಈ ವಿಷಯವನ್ನು ಸ್ವತಹ ಈಶ್ವರಪ್ಪ ಅವರೇ ಬಹಿರಂಗಪಡಿಸಿದ್ದಾರೆ. ನಿಷೇಧಿತ ಪಿ ಎಫ್ ಐ ಸಂಘಟನೆಗೆ ಸೇರಿದ ಬಂಧಿತ ಕಾರ್ಯಕರ್ತನೊಬ್ಬ ತಮ್ಮ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಹೇಳಿದ್ದಾರೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮ್ಮ ಪುತ್ರನಿಗೆ ಟಿಕೆಟ್ ದೊರಕಿಸಿ ಕೊಡುವಂತೆ ಹರಕೆ ಸಲ್ಲಿಸಲು ಬಳ್ಳಾರಿ ನಗರದಲ್ಲಿರುವ ತಮ್ಮ ಮನೆ ದೇವರಿಗೆ ಕುಟುಂಬ ಸದಸ್ಯರೊಂದಿಗೆ ಬಂದು ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್ ಪುಜಾರಿ ಅಲಿಯಾಸ್ ಶಾಹಿದ್ ಶೇಖ್ ತಮ್ಮ ಕೊಲೆಗೆ ಸ್ಕೆಚ್ ಹಾಕಿರೋ ವಿಚಾರ ಗೊತ್ತಾಗಿದೆ. ತಮ್ಮನ್ನು ಕೊಲೆ ಮಾಡಲು ಪಿತೂರಿ ನಡೆಸಲಾಗಿದೆ. ಈ ವ್ಯಕ್ತಿಗಳು ಕೇಂದ್ರ ಭೂಸಾರಿಗೆ ಸಚಿವ ಗಡ್ಕರಿ ಅವರಿಗೆ ಬೆದರಿಕೆ ಹಾಕಿದರು. ನನ್ನ ಕೊಲೆಗೂ ಪಿತೂರಿ ನಡೆಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಈ ಆರೋಪಿಯ ಹಿಂದೆ ಪಿಎಫ್‌ಐ ನವರ ಬೆಂಬಲ ಇದೆ ಎಂದು ಆಪಾದಿಸಿದರು.

ತಮ್ಮ ಹತ್ಯೆಗೆ ಗೆ ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ
ನನಗೆ ಹೆಚ್ಚಿನ ಭದ್ರತೆ ನೀಡಿ ಎಂದು ಅರ್ಜಿ ಹಾಕಲ್ಲ ಎಂದು ತಿಳಿಸಿದರು.

ಈ ಹಿಂದೆಯೂ ಕೊಲೆ ಬೆದರಿಕೆ ಬಗ್ಗೆ ಕರೆ ಬಂದಿತ್ತು. ಈ ವಿಚಾರವನ್ನು ವಿಧಾನಸಭೆಯ ಅಧಿವೇಶನದಲ್ಲಿಯೇ ಹೇಳಿದ್ದೆ. ಆಗ ಕಾಂಗ್ರೆಸ್ ಸರ್ಕಾರವಿತ್ತು. ನನಗೆ ಭದ್ರತೆ ನೀಡಿದ್ದರು. ನಾನು ಯಾವುದೇ ಬೆದರಿಕೆಗೆ ಬಗ್ಗಲ್ಲ. ಹಿಂದುತ್ವ ವಾದಿಗಳಿಗೆ ಬೆದರಿಕೆ ಸಾಮಾನ್ಯ. ಆದರೆ ನನ್ನ ನಿಲುವು ಬದಲಾಯಿಸಲ್ಲ. ಪೊಲೀಸರು ನನಗೆ ನೀಡಿದ ಮಾಹಿತಿ ಬಹಿರಂಗ ಪಡಿಸಿದ್ದೇನೆ ಎಂದು ಹೇಳಿದರು.

ರಾಜಕೀಯ ನಿವೃತ್ತಿ: ಪಕ್ಷದ ರಾಷ್ಟ್ರೀಯ ಮುಖಂಡ ಧರ್ಮೇಂದ್ರ ಪ್ರಧಾನ್ ರವರು ಕರೆ ಮಾಡಿ ಚುನಾವಣಾ ರಾಜಕೀಯ ಬೇಡ ಎಂದು ಹೇಳಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಯಂತೆ ಅವರು ಹೇಳಿದಂತೆ ಚುನಾವಣಾ ನಿವೃತ್ತಿ ಘೋಷಿಸಿ,ಪತ್ರ ಬರೆದು ಕಳುಹಿಸಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ತಮಗೆ ಬೂತ್ ಮಟ್ಟದ ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅವಕಾಶ ಲಭಿಸಿದೆ. ವರಿಷ್ಠರು ಇದೀಗ ಪಕ್ಷದ ಕೆಲಸ ಮಾಡು ಎಂದಿದ್ದಾರೆ. ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬರೋಕೆ ಯಾವ ಕೆಲಸ ಮಾಡೋದಕ್ಕೆ ಸಿದ್ದ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮ್ಮ ಪುತ್ರನಿಗೆ ಟಿಕೆಟ್ ಕೊಟ್ಟರೆ ಸಂತೋಷ. ಇಲ್ಲವಾದರೂ ಕೂಡ ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದರು.

Leave a Reply