ಬೆಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಬೆಂಗಳೂರು ದಕ್ಷಿಣ 23ನೇ ಜಿಲ್ಲಾ ಸಮ್ಮೇಳನ ಕುಮಾರಸ್ವಾಮಿ ಲೇಔಟ್ನಲ್ಲಿರುವ ಉಡುಪಿ ಸ್ವಾದ್ ಹೋಟೆಲ್ ನ ಕನ್ನಡ ಭವನ ಸಭಾಂಗಣದಲ್ಲಿ ನವೆಂಬರ್ 20 ಮತ್ತು 21ರಂದು ನಡೆಯಲಿದೆ.
ಇತ್ತೀಚೆಗೆ ನಿಧನರಾದ ಸಿಪಿಐ(ಎಂ) ನಾಯಕ ಕಾಂ.ಎಂ.ರಾಜಣ್ಣ ವೇದಿಕೆ, ಕಾಂ.ವೈ.ಸಿ.ಸುಬ್ರಹ್ಮಣ್ಯ ಸಭಾಂಗಣ ಮತ್ತು ಕಾಂ.ಸೀತಾಲಕ್ಷ್ಮಿ ನಗರ ಎಂದು ಹೆಸರಿಸಲಾಗಿದೆ. ಪ್ರತಿನಿಧಿ ಅಧಿವೇಶನವನ್ನು ರಾಜ್ಯ ಸಮಿತಿ ಸದಸ್ಯೆ ಕೆ.ಎಸ್.ವಿಮಲಾ ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಆರಂಭವಾಗಲಿದೆ. ರಾಜ್ಯ ಮುಖಂಡರಾದ ಎಸ್.ವರಲಕ್ಷ್ಮಿ ಅಧಿವೇಶನ ಉದ್ಘಾಟಿಸಲಿದ್ದಾರೆ.
ಸಮ್ಮೇಳನ ಕಳೆದ 4 ವರ್ಷಗಳ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಬೆಳವಣಿಗೆಯ ಕುರಿತು ಚರ್ಚಿಸಿ ಮುಂದಿನ ಕಾರ್ಯಯೋಜನೆ ರೂಪಿಸಲಿದೆ. ಕೇರಳದ ಕಣ್ಣೂರಿನಲ್ಲಿ 2022 ಏಪ್ರಿಲ್ನಲ್ಲಿ ನಡೆಯಲಿರುವ 23ನೇ ಮಹಾಧಿವೇಶನ ಪೂರ್ವ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುತ್ತಿರುವ 23ನೇ ರಾಜ್ಯ ಸಮ್ಮೇಳನದ ಭಾಗವಾಗಿ ಈ ಸಮ್ಮೇಳನ ನಡೆಯುತ್ತಿದೆ.
ಅದರ ಪೂರ್ವದಲ್ಲಿ ನವೆಂಬರ್ 19ರಂದು ಬಹಿರಂಗ ಅಧಿವೇಶನ ಸಾರಕ್ಕಿ ಸರ್ಕಲ್ ಬಳಿಯ ಸಿಂಧೂರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ. ಬಹಿರಂಗ ಅಧಿವೇಶನಕ್ಕೂ ಮೊದಲು ದುಡಿಯುವ ಜನರ ರಾಜಕೀಯ ಹಕ್ಕೊತ್ತಾಯದ ರ್ಯಾಲಿ ಬನಶಂಕರಿ ಬಸ್ ನಿಲ್ದಾಣದಿಂದ ಸಿಂಧೂರ ಕಲ್ಯಾಣ ಮಂಟಪದವರೆಗೆ ನಡೆಯಲಿದೆ. ಬಹಿರಂಗ ಅಧಿವೇಶನದಲ್ಲಿ ಸಿಪಿಐ(ಎಂ) ರಾಜ್ಯ ಕೇಂದ್ರದ ಸದಸ್ಯರಾದ ಮೀನಾಕ್ಷಿ ಸುಂದರಂ ಉದ್ಘಾಟಿಸಲಿದ್ದಾರೆ. ಎಸ್.ವರಲಕ್ಷ್ಮಿ, ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್, ಡಾ.ಕೆ.ಪ್ರಕಾಶ್ ಬಹಿರಂಗ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಟಿ.ಸುರೇಂದ್ರ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭೂಮ್ತಾಯಿ ಬಳಗದ ನಿರ್ಮಲ ಮತ್ತು ಸಂಗಡಿಗರು ಹಾಡುಗಳನ್ನು ಹಾಡಲಿದ್ದಾರೆ. ಮಳೆಯ ಕಾರಣ ಕದಿರೇನಹಳ್ಳಿ ಕ್ರಾಸ್ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಅಧಿವೇಶನವನ್ನು ಸಿಂಧೂರ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.
ಸಮ್ಮೇಳನದ ಸಭಾಂಗಣದ ಆವರಣದಲ್ಲಿ ಕಳೆದ 4 ವರ್ಷಗಳ ಪಕ್ಷದ ಮಧ್ಯಪ್ರವೇಶ ಮತ್ತು ಹೋರಾಟ ಹಾಗು ಚಳುವಳಿಯನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ʻನಾಲ್ಕು ವರ್ಷಗಳ ಹೆಜ್ಜೆ ಗುರುತುʼ ಕಾಂ.ಪುರುಷೋತ್ತಮ ಕಲಾಲಬಂಡಿ ಕಾರ್ನರ್ ಅನ್ನು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ನವೆಂಬರ್ 18ರ ಸಂಜೆ 6.30ಕ್ಕೆ ಉದ್ಘಾಟಿಸಲಿದ್ದಾರೆ. ಆನಂತರ ಮೈಸೂರಿನ ಜನ್ನಿ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. 20ರಂದು ಸಂಜೆ ಮಂಡ್ಯದ ಅರುಣೋದಯ ಕಲಾತಂಡದ ಮಂಜುಳ ಮತ್ತು ಸಂಗಡಿಗರಿಂದ ಗಾಯನ ಕಾರ್ಯಕ್ರಮವಿರುತ್ತದೆ.
ರಾಜ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಹಾಗು ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಿದೆ. 21ರಂದು ಸಂಜೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ.




