ಭ್ರಷ್ಟಾಚಾರ ನಡೆಸುವುದನ್ನು ತೋರಿಸಿದವರೆ ಕಾಂಗ್ರೆಸ್ಸಿಗರು: ಬೊಮ್ಮಾಯಿ
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೇಗೆ ಅಕ್ರಮ ನಡೆಸಬೇಕು ಎಂಬುದನ್ನು ರಾಜ್ಯ ಮತ್ತು ದೇಶಕ್ಕೆ ತೋರಿಸಿಕೊಟ್ಟವರು ಕಾಂಗ್ರೆಸ್ ನಾಯಕರು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಂಥವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿರುವುದೇ ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರು ಸಾವಿರ ಕೊಡುವೆ ಎಂದ ರಮೇಶ್ ಜಾರಕಿಹೊಳಿ ಮತ್ತು ತಮ್ಮ ವಿರುದ್ಧ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ಆರೋಪಗಳಡಿ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್. ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದರು.
ಕಾಂಗ್ರೆಸ್ ನವರು ಮಾಡುತ್ತಿರುವ ರೀತಿ ನಾವು ಕೂಡ ನೂರಾರು ದೂರುಗಳನ್ನು ಕೊಡಬಹುದು. ದೇಶದಲ್ಲಿ ಕಾನೂನುಗಳಿವೆ. ತನಿಖಾ ಸಂಸ್ಥೆಗಳಿವೆ. ಇವರು ಹೇಳಿದ್ದೇ ಅಂತಿಮವೇ ಎಂದರು.
ಚುನಾವಣೆಯಲ್ಲಿ ಸೋಲುವುದು ಗೊತ್ತಾಗಿಯೇ ಕಾಂಗ್ರೆಸ್ ನಾಯಕರು ಜನತೆಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದರಲ್ಲಿ ನೀವು ಯಶಸ್ವಿಯಾಗುವುದಿಲ್ಲ. ನೀವು ನಮ್ಮ ವಿರುದ್ಧ ನೂರು ದೂರುಗಳನ್ನು ಕೊಡಬಹುದು. ಕುಣಿಗಲ್ನಲ್ಲಿ ನಿಮ್ಮ ಪಕ್ಷದವರೇ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದೀರಿ. ಇದಕ್ಕಿಂತ ನಿರ್ದಶನ ಇನ್ನೇನು ಬೇಕು ಎಂದರು.
ತಾವು ಸೋಲುತ್ತೇವೆ ಎಂಬುದು ಗ್ಯಾರಂಟಿ ಆಗಿದೆ. ಹತಾಶೆಯಿಂದ ಈ ರೀತಿ ದೂರು ಕೊಡುವುದು, ಇನ್ನೊಂದು ಮತ್ತೊಂದು ಎಂದು ಎಲ್ಲಾ ಮಾಡುತ್ತಿದ್ದಾರೆ. ಅವರು ಕಂಪ್ಲೇಂಟ್ ಕೊಟ್ಟರೆ ನಾವು 100 ಕಂಪ್ಲೇಂಟ್ ಕೊಡಬಹುದು ಎಂದರು
ಮೊದಲು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂಬುದನ್ನು ಮರೆಯಬೇಡಿ. ಕುಣಿಗಲ್ನಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಗಳನ್ನು ಸಾಕ್ಷಿ ಸಮೇತ ವಾಣಿಜ್ಯ ತೆರಿಗೆ ಅಕಾರಿಗಳು ಹಿಡಿದು ನಾಲ್ವರಿಗೆ ದಂಡ ಹಾಕಿದ್ದಾರೆ. ಕುಕ್ಕರ್ ಹಂಚುತ್ತಿದ್ದ ಫೋಟೋಗಳು ಸಹ ಸಿಕ್ಕಿಬಿದ್ದಿವೆ. ಹಾಗಾದರೆ ಇದು ಕಾಂಗ್ರೆಸ್ ಸಂಸ್ಕೃತಿಯೇ ಎಂದರು.



