ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿರುವ ಗಾಯಿತ್ರಿ ನಗರದ ಅಂಬಾಭವಾನಿ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯವರು ತೋಡಿದ ಗುಂಡಿ ಜಾರಿದಾಗ ಪಕ್ಕದಲ್ಲಿ ಬರುತ್ತಿದ ಟ್ರ್ಯಾಕ್ಟರ್ ಅವರ ಮೇಲೆ ಹರಿದು ಕುಮಾರ್ ಮೃತಪಟ್ಟಿದ್ದರು.
ಬಿ.ಬಿ.ಎಂ.ಪಿ. ಬೇಜಬ್ದಾರಿ ಆಡಳಿತ ಖಂಡಿಸಿ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಿ.ಸಿ.ಬಿ ಬ್ಯಾಂಕ್ ಹತ್ತಿರ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಕಾಂಗ್ರೆಸ್ ಪಕ್ಷದ ಪ್ರಮುಖರು, ಮಹಿಳಾ ಕಾಂಗ್ರೆಸ್, ಯುವ ಕಾರ್ಯಕರ್ತರು ಮೇಣದಬತ್ತಿ ಹಿಡಿದು, ಮೃತಪಟ್ಟ ವ್ಯಕ್ತಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಕುಟುಂಬಕ್ಕೆ ಆತ್ಮಸ್ಥೈರ್ಯ ಸಿಗಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ಮಾತನಾಡಿದ ಅನೂಪ್ ಅಯ್ಯಂಗಾರ್, ರಸ್ತೆ ಗುಂಡಿಗಳಿಂದ ಕಳೆದ ಎರಡು ವರ್ಷಗಳಲ್ಲಿ 10ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ನೂರಾರು ಸವಾರರು ಗಾಯಾಳುಗಳಾಗಿದ್ದಾರೆ. ಸರ್ಕಾರ ಮತ್ತು ಬಿ.ಬಿ.ಎಂ.ಪಿ. ಸಾವಿರಾರು ಕೋಟಿ ರಸ್ತೆ ಡಾಂಬರೀಕರಣ ಮಾಡಲು ಅನುದಾನ ನೀಡುತ್ತವೆ. ಕಮಿಷನ್ ದಂಧೆ ಮತ್ತು ಕಳಪೆ ಕಾಮಗಾರಿಗಳಿಂದ ಡಾಂಬರೀಕರಣ ರಸ್ತೆಗಳು ಕಿತ್ತುಹೋಗುತ್ತಿವೆ ಎಂದು ಕಿಡಿಕಾರಿದರು.
ಬೆಂಗಳೂರುನಗರ ಗುಂಡಿಗಳ ನಗರ ಎಂಬ ಅಪಖ್ಯಾತಿ ಬರುವಂತೆ ಮಾಡಿದ್ದಾರೆ. ಹೈಕೋರ್ಟ್ ಹಲವಾರು ಬಾರಿ ಗುಂಡಿಮುಚ್ಚಲು ಆದೇಶ ನೀಡಿದರು ಪಾಲನೆಯಾಗುತ್ತಿಲ್ಲ. ರಸ್ತೆ ಗುಂಡಿಗಳನ್ನ ಮುಚ್ಚಿ ಜನರ ಜೀವ ಉಳಿಸಿ ಎಂಬ ಮನವಿ ನಮ್ಮದು ಎಂದರು.
ಸರ್ಕಾರ ಮತ್ತು ಬಿ.ಬಿ.ಎಂ.ಪಿ. ಈ ಕೂಡಲೆ ಉತ್ತಮ ರಸ್ತೆ ನಿರ್ಮಾಣ ಹಾಗೂ ಗುಂಡಿ ಮುಚ್ಚುವ ಕಾಮಗಾರಿ ಮಾಡದೇ ಹೋದರೆ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.




