ಬೆಂಗಳೂರು: ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚುನಾವಣಾ ಅಕ್ರಮಗಳ ಮೇಲೆ ಆಯೋಗ ಹದ್ದಿನ ಕಣ್ಣಿರಿಸಿದೆ.
ಮತದಾರರಿಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ಆಮಿಷವೊಡ್ಡದಂತೆ ನಿಗಾವಹಿಸಲು ಅಧಿಕಾರ ಯಂತ್ರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದರನ್ವಯ ಪೊಲೀಸ್, ಕಂದಾಯ, ಅಬಕಾರಿ, ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳು ತೀವ್ರ ನಿಗಾವಹಿಸಿದ್ದು,ಅಕ್ರಮ ತಡೆಗೆ ಹದ್ದಿನ ಕಣ್ಣಿರಿಸಿದ್ದಾರೆ.
ಈ ನಡುವೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದ ಮದ್ಯದ ಬಾಕ್ಸ್ ಗಳು ನಾಪತ್ತೆಯಾದ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ.
ಕಳೆದ ಮಾ.7ರಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಮೋಡೆಕೊಪ್ಪ ಗ್ರಾಮದ ಬಳಿ ಗೋವಾದಿಂದ ಅನಧಿಕೃತವಾಗಿ ತಂದಿದ್ದ 47 ಲಕ್ಷ ಬೆಲೆ ಬಾಳುವ 753 ಮದ್ಯದ ಬಾಕ್ಸ್ಗಳನ್ನು ಪೊಲೀಸರು, ಜಾಗೃತ ದಳ ಹಾಗೂ ಅಬಕಾರಿ ಇಲಾಖೆಯ ಅಪೊಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದರು.
ವಶಪಡಿಸಿಕೊಂಡ 753 ಬಾಕ್ಸ್ಗಳ ಪೈಕಿ ಮರುದಿನವೇ 301 ಬಾಕ್ಸ್ಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿಗಳು ಇಲಾಖಾ ತನಿಖೆಗೆ ಸೂಚನೆ ಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ತಂಡ ಸುದೀರ್ಘ ಪರಿಶೀಲನೆ ನಡೆಸಿದಾಗ,ಅಬಕಾರಿ ಇಲಾಖೆಯವರೇ ಶಾಮೀಲಾಗಿರುವುದು ಪತ್ತೆಯಾಗಿದೆ.
ತನಿಖಾ ತಂಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದೆ ಇದರ ಆಧಾರದಲ್ಲಿ ಅಕ್ರಮದಲ್ಲಿಬಶಾಮೀಲಾದ ಆರೋಪದ ಮೇರೆಗೆ ಮೂವರು ಹಿರಿಯ ಅಧಿಕಾರಿಗಳು ಸೇರಿದಂತೆ ಅಬಕಾರಿ ಇಲಾಖೆಯ ಐವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ದೇವಲ್ ಸಾಬಾ ಸಿಂಡೋಗಿ, ಸದಾಶಿವ ಕೊರ್ಟಿ, ಪೊಲೀಸ್ ಅಧಿಕಾರಿಗಳಾದ ಪುಷ್ಪಾ ಗಡಗಿ ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ.




