ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಎತ್ತುವ ಧ್ವನಿಯನ್ನು ಅಡಗಿಸಲು ರಾಜ್ಯ ಸರ್ಕಾರದಿಂದ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ ಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಕಾನೂನು ದುರುಪಯೋಗವಾಗುತ್ತಿದೆ ಎನ್ನುವ ಮೂಲಕ ಬಿಜೆಪಿ ನಡೆ ಬೆಂಬಲಿಸಿದರು.
ಹಾಸನದ ಬೇಲೂರು ಬಳಿ ಮರ ಕಡಿದ ವಿಚಾರಕ್ಕೆ ಬಿಎಸ್ಎಫ್, ಎಸಿಎಫ್, ಆರ್ಎಫ್ಒ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಿಸಿಸಿಎಫ್ ಅವರಿಗೆ ಕರೆ ಮಾಡಿ ಗೆಂಡೆಕೆರೆ ಅರಣ್ಯದಲ್ಲಿ ಬೀಟೆ ಮರ ಕಡಿದು, ಮರ ಕಡಿದಿರುವ ಪ್ರದೇಶಕ್ಕೆ ತಂದು ಹಾಕಿ ಎಂಬ ಸೂಚನೆ ನೀಡಿದ್ದರು ಎಂದು ಆರೋಪಿಸಿದರು.
ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದಕ್ಕೆ ಅರಣ್ಯ ಸಚಿವ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ವಿರೋಧವೂ ವ್ಯಕ್ತವಾಗಿದೆ ಎಂದರು.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಮರ ಕಡಿದ ಆರೋಪದಲ್ಲಿ ಬಂಧಿಸಿದ್ದಾರೆ. ಆದರೆ ಅವರು ಶುಂಠಿ ಬೆಳೆಯಲು ಲೀಸ್ ಪಡೆದಿದ್ದ ಅವಧಿ ಜನವರಿಯಿಂದ ಪ್ರಾರಂಭವಾಗುತ್ತಿತ್ತು. 4 ಎಕರೆ ಜಮೀನು ರಾಕೇಶ್ ಎಂಬುವರಿಗೆ ಮಂಜೂರಾಗಿದ್ದು, ಅವರ ಮಗಳು ವಿಕ್ರಮ್ ಸಿಂಹ ಅವರಿಗೆ ಶುಂಠಿ ಬೆಳೆಯಲು ಲೀಸ್ ನೀಡಿದ್ದರು. ಮರ ಕಡಿದ ಪ್ರಕರಣದಲ್ಲಿ ಮೊದಲ ಮತ್ತು 2ನೇ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಾರೆ. ಆದರೆ ಮೂರನೇ ಆರೋಪಿ ವಿಕ್ರಮ್ ಸಿಂಹ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ರೀತಿ ಸೇಡಿನ ಹಾಗೂ ಕುತಂತ್ರದ ರಾಜಕಾರಣ ಮಾಡಲಾಗುತ್ತಿದೆ ಎಂದು ಬಿಜೆಪಿ ಪರ ವಾದಿಸಿದರು.
ಅಮಾನತು ಮಾಡಿರುವ ಮೋಹನ್ಕುಮಾರ್ ಎಂಬ ಡಿಎಫ್ಒ ದಲಿತ ಸಮುದಾಯಕ್ಕೆ ಸೇರಿದವರು. ಅವರು ಯಾವ ತಪ್ಪು ಮಾಡದಿದ್ದರೂ ಅಮಾನತು ಮಾಡಲಾಗಿದೆ. ಹಾಸನಕ್ಕೆ ಈ ಅಧಿಕಾರಿ ವರ್ಗಾವಣೆಯಾದಾಗ, ವರ್ಗಾವಣೆ ಆದೇಶ ಪತ್ರವನ್ನು ಹಿಡಿದು ಶಾಸಕರೊಬ್ಬರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದರು.
ಈ ವಿಚಾರಕ್ಕೆ ಒಂದು ಆಯೋಗ ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದೀರಾ, ಮುಖ್ಯಮಂತ್ರಿ ಸೂಚನೆ ನೀಡಿರುವ ಬಗ್ಗೆ ಕಾಲ್ ಲಿಸ್ಟ್ ತನಿಖೆಯಾಗಲಿ ಸತ್ಯಾಂಶ ಗೊತ್ತಾಗುತ್ತದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ವಿಧಾನಪರಿಷತ್ ಸದಸ್ಯರ ಸಮ್ಮುಖದಲ್ಲೇ ಸರ್ಕಾರಿ ಜಮೀನಿನಲ್ಲಿ ಮರ ಕಡಿದ ಆರೋಪವಿದೆ. ಅದರ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಿದರು.




