ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಸಭೆ ನಡೆಯುತ್ತಿದ್ದು, ರಾಜ್ಯ ಉಸ್ತುವಾರಿ ನಾಯಕ ಅರುಣ್ ಸಿಂಗ್, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಬೀದರ್ ನಿಂದ ಕೇಂದ್ರ ಸಚಿವ ಹಾಗೂ ಬೀದರ್ ಸಂಸದ ಭಗವಂತ ಕೂಬಾಗೆ ಟಿಕೆಟ್ ನೀಡಬಾರದು ಎಂದು ಕೆಲವರು ಹೇಳಿದರು. ಇದಕ್ಕೆ ಶಾಸಕರಾದ ಪ್ರಭು ಚವ್ಹಾಣ್ ಮತ್ತು ಶರಣು ಸಲಗಾರ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ ಕೂಬಾ ಇದರಿಂದ ಕೆರಳಿ ಕೆಂಡವಾದರು. ನನಗೆ ಟಿಕೆಟ್ ಕೊಡಬಾರದೆಂದು ಹೇಳಲು ನೀವ್ಯಾರು? ನಾನು ಸ್ಪರ್ಧೆ ಮಾಡಬೇಕೋ ಬೇಡ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನೀವು ನಿಮ್ಮ ಅಭಿಪ್ರಾಯಗಳನ್ನು ಮಾತ್ರ ಹೇಳಬೇಕೆ ಹೊರತು ಟಿಕೆಟ್ ನೀಡಬಾರದೆಂದು ಹೇಳಿದರೆ ಅದನ್ನು ಕೇಳಿಸಿಕೊಂಡು ನಾನು ಸುಮ್ಮನಿರಬೇಕೆ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಈ ವೇಳೆ ಸಭೆಯ ಮಧ್ಯ ಭಾಗದಲ್ಲಿ ಕುಳಿತಿದ್ದ ಪ್ರಭು ಚವ್ಹಾಣ್ ಹಾಗೂ ಶರಣು ಸಲಗಾರ ವೇದಿಕೆಯತ್ತ ದೌಡಾಯಿಸಿ ಭಗವಂತ ಕೂಬಾ ವಿರುದ್ಧ ಏರಿದ ಧ್ವನಿಯಲ್ಲೇ ತಿರುಗಿಬಿದ್ದರು. ಪರಸ್ಪರ ಏಕ ವಚನದಲ್ಲಿ ವಾಗ್ವಾದ ನಡೆಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀವು ನಮ್ಮ ವಿರುದ್ಧ ಪ್ರಚಾರ ಮಾಡಿದ್ದೀರಿ. ನಮ್ಮನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಶಾಮೀಲಾಗಿ ಅಪಪ್ರಚಾರ ನಡೆಸಿದ್ದೀರಿ. ಆದರೆ ಕಾರ್ಯಕರ್ತರು ನಮ್ಮನ್ನು ಕೈಬಿಡದೆ ಇದ್ದಿದ್ದರಿಂದ ನಾವು ಗೆದ್ದುಬಂದೆವು. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ನಿಮ್ಮ ಪರವಾಗಿ ನಾವು ಹೇಗೆ ಪ್ರಚಾರ ನಡೆಸಬೇಕು ಎಂದು ಕೇಳಿದರು.
ಸಂಸದರಾದ ಮೇಲೆ ಒಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮನೆಗೆ ಬಂದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಪ್ರತಿಯೊಬ್ಬರನ್ನು ಸೊಕ್ಕು, ಮಾತು ಮತ್ತು ಅಹಂನಿಂದಲೇ ಮಾತನಾಡಿಸುತ್ತಿದ್ದೀರಿ, ನೀವು ಕೂಡ ಮೊದಲು ಕಾರ್ಯಕರ್ತರಾಗಿದ್ದೀರಿ ಎಂಬುದನ್ನು ಮರೆಯಬಾರದು ಎಂದು ವಾಗ್ದಾಳಿ ನಡೆಸಿದರು.
ಇದರಿಂದ ಕುಪಿತರಾದ ಭಗವಂತ ಕೂಬಾ ಲೋಕಸಭೆ ಚುನಾವಣೆಯಲ್ಲಿ ನೀವು ಏನೇನು ಮಾಡಿದ್ದೀರಿ ಎಂಬುದು ನನಗೂ ಗೊತ್ತು. ಪಕ್ಷ ಹೇಳಿದಂತೆ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೇನೆ. ನಿಮ್ಮಿಬ್ಬರ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನನಗೆ ಪಕ್ಷ ವಿರೋಧಿ ಹಣೆಪಟ್ಟಿ ಕಟ್ಟಿದರೆ ಮೌನ ವಹಿಸಬೇಕೇ? ಎಂದು ಮರುಪ್ರಶ್ನೆಯನ್ನು ಎಸೆದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ. ಇದು ಟಿಕೆಟ್ ಹಂಚಿಕೆಯ ಸಭೆಯಲ್ಲ. ಇಲ್ಲಿ ಕೇವಲ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ. ನಾವು ಯಾರೊಬ್ಬರೂ ಅಭ್ಯರ್ಥಿಗಳ ಆಯ್ಕೆ ನಡೆಸುವುದಿಲ್ಲ. ಏನಿದ್ದರೂ ಪಕ್ಷದ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ತೀರ್ಮಾನಿಸುತ್ತದೆ. ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ನಾಯಕರಿಗೆ ಸೂಚನೆ ನೀಡಿದರು.
ಇದಾದ ನಂತರ ಯಡಿಯೂರಪ್ಪ ಮತ್ತು ಬೊಮ್ಮಾಯಿ ಎಲ್ಲರನ್ನೂ ಸಮಾಧಾನಪಡಿಸಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.




