ಚಿತ್ರದುರ್ಗ: ಕೋವಿಡ್ -19, ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ಅಗತ್ಯವಿದ್ದು, ಜನರು ಆತಂಕವನ್ನು ಕೈಬಿಟ್ಟು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಮುಂದಾಗಬೇಕೆಂದು ಡಾ.ರಂಗನಾಥ್ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕು ಸಿದ್ಧಾಪುರ ನೂತನ NGO ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಾಕ್ಸಿನೇಷನ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸರ್ಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರು ಹಾಗೂ NGOಗಳ ಸಹಕಾರದೊಂದಿಗೆ ಕೊರೋನ ವೈರಸ್ ಅನ್ನು ತೊಡೆದುಹಾಕಲು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ಜನರಲ್ಲಿ ಭಯ ಮತ್ತು ಆತಂಕದ ವಾತಾವರಣವಿದ್ದು ಇವುಗಳನ್ನ ತೊಡೆದುಹಾಕಲು ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಎಂದು ನಾಗರಿಕರಿಗೆ ಸಲಹೆ ನೀಡಿದರು.
ಕೋವಿಡ್ -19, ಕೊರೋನಾ ವೈರಸ್ ನ ಮೂರು, ನಾಲ್ಕನೇ ಅಲೆಗಳು ಬರುವ ಸಾಧ್ಯತೆಗಳ ಬಗ್ಗೆ ವೈರಸ್ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದು, ಜನ ಯಾವುದೇ ಭಯ, ಭೀತಿಗೆ ಒಳಗಾಗದೆ ವ್ಯಾಕ್ಸಿನೇಷನ್ ಪಡೆದುಕೊಳ್ಳಿ ಎಂದರು.
ವ್ಯಾಕ್ಸಿನೇಷನ್ ಪಡೆಯುವುದರಿಂದ ಕೊರೋನಾ ಆತಂಕದಿಂದ ಹೊರಬರಲು ಸಾಧ್ಯ. ಗ್ರಾಮೀಣ ಭಾಗದ ಜನ ಪ್ರತಿಯೊಬ್ಬರು ವ್ಯಾಕ್ಸಿನೇಷನ್ ಪಡೆದು ಕೊರೋನಾ ಮುಕ್ತ ಜೀವನ ನಡೆಸಲು ಪ್ರಯತ್ನಿಸಬೇಕು ಎಂದರು.
ಸಿದ್ದಾಪುರ ನೂತನ NGO ಅಧ್ಯಕ್ಷ ರಘು (ರಾಘವೇಂದ್ರ) ಮಾತನಾಡಿ, ನೂತನ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಲಾಗಿದೆ. ಸಾರ್ವಜನಿಕರು, ಗ್ರಾಮೀಣ ಜನರು ಹೆಚ್ಚು ಆದ್ಯತೆ ನೀಡಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಭಾಗದ ಜನರ ಕ್ಷೇಮ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ತಿಂಗಳು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಅವರು ಆರೋಗ್ಯ ಇಲಾಖೆಯ ಸಹಯೋಗವನ್ನು ನಿರೀಕ್ಷಿಸುತ್ತೇವೆ ಎಂದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಆರೋಗ್ಯ ಸೇವೆ ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ನೆರವಿನೊಂದಿಗೆ ನೂತನ ಸಂಸ್ಥೆಯ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಸೇವೆ ಆರಂಭಿಸುವ ಅನಿವಾರ್ಯತೆ ಇದೆ ಎಂದರು.
ವ್ಯಾಕ್ಸಿನೇಷನ್ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಗಂಗಾಧರ, ರಮೇಶ್ ಕದುರಪ್ಪ, ಜಾನುಕೊಂಡ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಕ್ಷತಾ ಮಹೇಶ್ವರಪ್ಪ ಚಕ್ರಸಾಲಿ ನೂತನ ಸಿಬ್ಬಂದಿ ಹಾಜರಿದ್ದರು.



