ಬೆಂಗಳೂರು: ಮನುಷ್ಯ ಹುಟ್ಟಿದಾಗ ಹೆಸರು, ಕೀರ್ತಿ ಯಾವುದು ಇರುವುದಿಲ್ಲ, ನಂತರ ಅವನು ಮಾಡುವ ಕಾಯಕದಿಂದ ಜನರ ಹೃದಯದಲ್ಲಿ ದೇವರಾಗಿ ನಿಲ್ಲುತ್ತಾನೆ ಇದಕ್ಕೆ ಉದಾಹರಣೆಯಂದರೆ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿರವರು ಎಂದು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್ ನಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ಸಿದ್ದಗಂಗಾ ಕ್ಷೇತ್ರದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಯವರ 4ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಅನ್ನ, ಅಕ್ಷರ, ಆಶ್ರಯ ತ್ರಿವಿಧ ದಾಸೋಹ ಮೂಲಕ ಕೋಟ್ಯಂತರ ಜನರಿಗೆ ನೀಡಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಕ್ರಾಂತಿಕಾರಿ ಹೆಜ್ಜೆ ಇಟ್ಟ ಮಹಾನ್ ಸಂತ ಶಿವಕುಮಾರ ಸ್ವಾಮೀಜಿರವರಿಗೆ ಜನರೇ ನಡೆದಾಡುವ ದೇವರು ಎಂದು ಅವರ ಹೃದಯದಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡರು ಎಂದರು.
ನಾವು ದುಡಿದ ಹಣದ ಸ್ವಲ್ಪ ಭಾಗವನ್ನು ಸಮಾಜ ಅಭಿವೃದ್ದಿಗೆ ವಿನಿಯೋಗ ಮಾಡಬೇಕು. ಕಾಯಕ ಮಹತ್ವ ಪ್ರತಿಯೊಬ್ಬರು ಅರಿಯಬೇಕು. ಇಂದಿನ ಮಕ್ಕಳು ಮೊಬೈಲ್ ನಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ತಂದೆ, ತಾಯಂದಿರಿಗೆ ಗೌರವ ಕೊಡುವುದಿಲ್ಲ. ಕಾರಣ ಅವರ ಸಂಸ್ಕೃತಿ, ಸಂಪ್ರಾದಯದ ಕುರಿತು ಅರಿವು ಇಲ್ಲ. ಮಕ್ಕಳಿಗೆ ಕಲೆ, ಸಾಹಿತ್ಯ, ಸ್ವಾತಂತ್ರ್ಯ ಸಂಗ್ರಾಮ ಕುರಿತು, ಸಂತರ ಜೀವನ ಚರಿತ್ರೆಗಳನ್ನು ಮಕ್ಕಳಿಗೆ ತಿಳಿಸಬೇಕು. ಆಗ ಮಕ್ಕಳು ಉತ್ತಮ ಮಾರ್ಗದಲ್ಲಿ ಸಾಗುತ್ತಾರೆ ಎಂದರು.
ಹಸಿವಿನಿಂದ ಯಾರು ಬಳಲಬಾರದು ಎಂಬ ಆದರ್ಶ ಪಾಲನೆಗಾಗಿ ಶ್ರೀ ಶಿವಕುಮಾರ ಸ್ವಾಮೀಜಿರವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವಾಗಿ ಅಚರಿಸಲಾಗುತ್ತಿದೆ. ವಸತಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ನವ ನಿರ್ಮಾಣದತ್ತ ಸಾಗುತ್ತಿದೆ. ಇದೇ ತಿಂಗಳು 29ನೇ ಹಾಗೂ ಮುಂದಿನ ತಿಂಗಳು 16ನೇ ತಾರೀಖು ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಕನ್ನಡ ಪರ ಹೋರಾಟಗಾರ ಪಾಲನೇತ್ರ ಮಾತನಾಡಿ, ಶ್ರೀ ಶಿವಕುಮಾರ ಮಹಾಸ್ವಾಮಿಜೀರವರು 80 ವರ್ಷಗಳ ಕಾಲ ಸಿದ್ದಗಂಗಾ ಮಠವನ್ನು ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಕೋಟ್ಯಂತರ ಜನರ ಬಾಳಿಗೆ ಬೆಳಕಾದರು. ಕಾಯಕಯೋಗಿ ಶ್ರೀ ಬಸವೇಶ್ವರರನ್ನು ನೋಡುವ ಭಾಗ್ಯ ನಮಗೆ ಸಿಗಲಿಲ್ಲ. ಆದರೆ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳನ್ನು ನೋಡುವ, ದರ್ಶನ ಪಡೆಯುವ ಅವಕಾಶ ಲಭಿಸಿರುವುದು ನಮ್ಮ ಜೀವನದ ಪುಣ್ಯಫಲ ಎಂದರು.
ದಾಸೋಹ ದಿನದ ಪ್ರಯುಕ ಸಾರ್ವಜನಿಕರಿಗೆ ಅನ್ನ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಗೋವಿಂದರಾಜನಗರ ನಾಯಕರಾದ ವಿಶ್ವನಾಥಗೌಡ, ದಾಸೇಗೌಡ ಮೊದಲಾದವರು ಹಾಜರಿದ್ದರು.



