ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ವಂಚನೆ ಪ್ರಕರಣದ ಸಂಪೂರ್ಣ ರೂವಾರಿ ಚೈತ್ರಾ ಕುಂದಾಪುರ ಮತ್ತು ಆಕೆಯ ಗೆಳೆಯ ಶ್ರೀಕಾಂತ್ ಪೂಜಾರಿ ಎನ್ನುವುದು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.
ವಂಚನೆಯ ಸಂಬಂಧ ಎಲ್ಲವೂ ತಾನು ಮತ್ತು ಶ್ರೀಕಾಂತ್ ಪೂಜಾರಿ ನಡೆಸಿದ ಸಂಚು ಎನ್ನುವುದನ್ನು ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ತಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಚೈತ್ರಾ ಸೇರಿ ಎಲ್ಲ ಆರೋಪಿಗಳ ಹೇಳಿಕೆಯನ್ನು ಸಿಸಿಬಿ ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಸಿದ್ದಾರೆ. ಮೊದಲ ಹಂತದಲ್ಲಿ ನನ್ನನ್ನು ಈ ಪ್ರಕರಣದಲ್ಲಿ ಬಲವಂತವಾಗಿ ಸಿಲುಕಿಸಿದ್ದಾರೆ ಎಂದು ಅರೋಪ ಮಾಡಿದ್ದಳು. ಬಳಿಕ ಊಟ, ತಿಂಡಿ ಮಾಡದೆ ನಿತ್ರಾಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಈ ಸಮಯದಲ್ಲೇ ತನಿಖಾಧಿಕಾರಿಗಳು ಹೆಚ್ಚಿನ ಸಾಕ್ಷಿಗಳು ಮತ್ತು ವಂಚನೆ ಹಣವನ್ನು ಪತ್ತೆ ಮಾಡಿ ಜಪ್ತಿ ಮಾಡಿದ್ದರು.
ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಆಕೆಯ ಮುಂದೆ ಸಾಕ್ಷಿಗಳನ್ನು ಇಟ್ಟು ವಿಚಾರಣೆ ಮಾಡಲಾಯಿತು. ಆಗ ಸ್ವಾಮೀಜಿಯ ಮೇಲೆ ಆರೋಪ ಮಾಡಿದಳು. ಯಾವಾಗ ಹಾಲಶ್ರೀ ಸ್ವಾಮೀಜಿ ಬಂಧನವಾದರೂ ಆ ಬಳಿಕ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಪೂಜಾರಿಯ ಬಂಡವಾಳವೂ ಬಯಲಾಯಿತು.
ಹಾಲಶ್ರೀ ಸ್ವಾಮೀಜಿ ಸಿಕ್ಕರೆ ಎಲ್ಲ ಹೊರಗೆ ಬರತ್ತೆ ಎಂದು ಹೇಳಿದ್ದಳು. ಸ್ವಾಮೀಜಿಯನ್ನು ಬಂಧಿಸುವುದಿಲ್ಲ ಎಂದುಕೊಂಡು ಚೈತ್ರಾ ಈ ರೀತಿ ಹೇಳಿಕೆ ನೀಡಿದ್ದಳು. ಇತ್ತ ಸ್ವಾಮೀಜಿ ಬಂಧನವಾಗುತ್ತಿದ್ದಂತೆಯೇ ಆಕೆ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ. ಸ್ವಾಮೀಜಿ ಮತ್ತು ಚೈತ್ರಾ ಕುಂದಾಪುರ ಇಬ್ಬರನ್ನು ಮುಖಾಮುಖಿ ವಿಚಾರಣೆ ನಡೆಸಲಾಗಿದೆ. ಸಾಕ್ಷಿಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಕಣ್ಣೀರು ಹಾಕಿ ತನ್ನ ತಪ್ಪನ್ನು ಚೈತ್ರಾ ಒಪ್ಪಿಕೊಂಡಿದ್ದಾಳೆ. ಜೀವನದಲ್ಲಿ ಸೆಟಲ್ ಆಗುಬೇಕೆಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾಳೆ. ತಮ್ಮ ಪರಿಚಿತರ ಮೂಲಕ ಗೋವಿಂದ ಬಾಬುರನ್ನು ಮುನ್ನೆಲೆಗೆ ತರುವುದು, ಆ ನಂತರ ಟಿಕೆಟ್ ವಿಚಾರದಲ್ಲಿ ನಂಬಿಕೆ ಬರುವಂತೆ ಸನ್ನಿವೇಶಗಳನ್ನು ಸೃಷ್ಟಿ ಮಾಡುವುದು, ಒಂದು ವೇಳೆ ಟಿಕೆಟ್ ಸಿಕ್ಕರೆ ತಮ್ಮ ಸಂಚು ಯಶಸ್ಸುಗಳಿಸಲಿದೆ ಎಂದು ಮತ್ತು ಟೆಕೆಟ್ ಸಿಗದೇ ಹಣ ವಾಪಸ್ ಕೇಳಿದಾಗ ಹೊಸ ನಾಟಕಕ್ಕೂ ಚೈತ್ರಾ ಪ್ಲಾನ್ ಮಾಡಿದ್ದಳು.
ಹಣವನ್ನು ನಾವು ಇಟ್ಟುಕೊಂಡಿಲ್ಲ, ಎಲ್ಲವನ್ನು ವಿಶ್ವನಾಥ್ ಜಿಗೆ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಳು. ನಾವುಗಳು ನೆಪ ಮಾತ್ರಕ್ಕೆ ಸಹಾಯ ಮಾಡಿದವರು, ಹಣ ತೆಗೆದುಕೊಂಡು ಹೋಗಿ ನೀಡುವುದು ಅಷ್ಟೇ ನಮ್ಮ ಕೆಲಸ ಎಂದು ಹೇಳಲು ಮುಂದಾಗಿದ್ದರು.
ಹಣ ಬೇಕು ಎಂದಾಗ ವಿಶ್ವನಾಥ್ ಜಿ ಸಾವನಪ್ಪಿದ್ದಾರೆ ನಮಗೆ ಏನೂ ಗೊತ್ತಿಲ್ಲಾ ಎಂದು ಹೇಳಲು ಸಂಚು ರೂಪಿಸಿದ್ದರು. ಇದರಲ್ಲಿ ಚೈತ್ರಾ ಕುಂದಾಪುರಗೆ ಹೆಚ್ಚು ಹಣ ಹೋಗಿದೆ. ಐದು ಕೋಟಿ ಪೈಕಿ ಸುಮಾರು ಮೂರೂವರೆ ಕೋಟಿ ಚೈತ್ರಾ ಕೈ ಸೇರಿತ್ತು.




