ಮುಕ್ತ, ಶಾಂತಿಯುತ ಚುನಾವಣೆ ನಡೆಸುವ ದೃಷ್ಟಿಯಿಂದ ಕೇಂದ್ರೀಯ ಪಡೆಗಳನ್ನು ನಿಯೋಜಿಸಬೇಕು: ಆರ್.ಅಶೋಕ್

2 years ago

ಬೆಂಗಳೂರು: ಕಾಂಗ್ರೆಸ್ ಆಡಳಿತ ದುರುಪಯೋಗ ಮಾಡುತ್ತಿರುವುದಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಾಕ್ಷಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ದೃಷ್ಟಿಯಿಂದ ಚುನಾವಣಾ ಆಯೋಗ ಕೇಂದ್ರೀಯ ಪಡೆಗಳನ್ನು ನಿಯೋಜಿಸಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 10 ತಿಂಗಳಾಗಿದೆ. ಈ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೆ ಗ್ಯಾರೆಂಟಿ ಗುಂಗಿನಿಂದ ಸರ್ಕಾರ ಹೊರ ಬಂದಿಲ್ಲ ಜನ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಜಾನುವಾರುಗಳಿಗೆ ಮೇವು, ಕುಡಿಯಲು ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಚುನಾವಣೆಯಲ್ಲಿ ನಿರತರಾಗಿದ್ದಾರೆ. ಜನರ ಸಂಕಷ್ಟಗಳನ್ನು ಕೇಳುವವರು ಯಾರು ಎಂದರು.

ಸಂಸ್ಕೃತಿ ಇಲ್ಲದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ನೀರಾವರಿ ಸಚಿವರು ಕುಡಿಯಲು ನೀರು ಕೊಡದ ಪರಿಸ್ಥಿತಿಯಲ್ಲಿ ತಂದೊಡ್ಡಿದ್ದಾರೆ. ಬ್ರಾಂಡ್ ಬೆಂಗಳೂರು ಆಯ್ತು, ಬಾಂಬ್ ಬೆಂಗಳೂರು ಆಯ್ತು ಈಗ ಬಾಯ್ ಬಾಯ್ ಬೆಂಗಳೂರು ಆಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅವರಿಗೆ ಮೋದಿ ಅವರ ಬಗ್ಗೆ, ಮೋದಿ ಅವರ ಜಾತಿ ಬಗ್ಗೆ ಆಡಿದ ಮಾತಿಗೆ ಜೈಲಿನ ಕಂಬಿ ಎಣಿಸುವ ಶಿಕ್ಷೆ ಆಗಿದೆ. ಇಷ್ಟಾದರೂ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಈಗಾಗಲೇ ಬಹಳಷ್ಟು ಹೇಳಿಕೆಗಳು ಹೊರಬಂದಿದೆ ಎಂದರು.

ಚಾಯ್ವಾಲಾ ಎಂದರು. ಚಾಯ್ ಪೇ ಚರ್ಚೆ ಆಯೋಜನೆ ಮಾಡಿದರು. ಅಂದೇ ಬುದ್ಧಿ ಕಲಿಯಬಹುದಿತ್ತು. ಆದಾದ ಮೇಲೆ ಚೌಕಿದಾರ್ ಚೋರ್ ಅಂದರು. ಅದನ್ನೇ ನಾವು ಅಸ್ತ್ರ ಮಾಡಿಕೊಂಡ್ವಿ. ನಾವೆಲ್ಲಾ ಚೌಕಿದಾರ್ ಅಂದೇವು. ಲಾಲ್ಲೂ ಪ್ರಸಾದ್ ಯಾದವ್ ಪರಿವಾರ್ ಅಂದರು. ನಾವೆಲ್ಲಾ ಮೋದಿ ಪರಿವಾರ್ ಎಂದೆವು ಎಂದರು.

Leave a Reply