ಒಬಾಮ ಭೇಟಿ ವೇಳೆ ಸ್ಫೋಟ ಸಂಚು: ಶಿಕ್ಷೆ ಪ್ರಕಟ

1 year ago

ಬೆಂಗಳೂರು: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ್ದ ಭಟ್ಕಳ ಮೂಲದ ಮೂವರು ಇಂಡಿಯನ್ ಮುಜಾಹಿದ್ದೀನ್  ಉಗ್ರರಿಗೆ ರಾಷ್ಟ್ರೀಯ ತನಿಖಾ ದಳ ವಿಶೇಷ ನ್ಯಾಯಾಲಯ 10 ವರ್ಷಗಳ  ಜೈಲು ಶಿಕ್ಷೆ ವಿಧಿಸಿದೆ.

2015ರಲ್ಲಿಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಫೋಟ ನಡೆಸಲು ಸಂಚು ಹೂಡಿದ್ದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನಂತರ ದೋಷಿ ಎಂದು ಕೆಲ ದಿನಗಳ ಹಿಂದಷ್ಟೇ ಕೋರ್ಟ್ ತೀರ್ಪು ನೀಡಿ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟಿಸಿದ್ದು ಅಪರಾಧಿಗಳಿಗೆ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಅಫಾಕ್, ಸಬೂರ್ ಮತ್ತು ಹುಸೇನ್ ಎಂಬ ಮೂವರು ಅಪರಾಧಿಗಳು ಪಾಕಿಸ್ತಾನದ ಆಣತಿಯಂತೆ ದುಷ್ಕೃತ್ಯಕ್ಕೆ ಸಂಚು ಹೂಡಿದ್ದರು ಎಂದು ತನಿಖಾ ತಂಡ ಆರೋಪ ಸಾಬೀತು ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಅಫಾಕ್ಗೆ 1.55 ಲಕ್ಷ ರೂಪಾಯಿ, ಸಬೂರ್ ಮತ್ತು ಹುಸೇನ್ಗೆ ತಲಾ 95,000 ರೂಪಾಯಿ ದಂಡ ವಿಧಿಸಿದೆ.

ಮೂವರೂ ಅಪರಾಧಿಗಳಿಗೆ ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
2015ರಲ್ಲಿ ನಗರದ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಸಿಬಿ ಎಸಿಪಿ ತಮ್ಮಯ್ಯ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದೇ ಪ್ರಕರಣದಲ್ಲಿ ಭಟ್ಕಳದ ರಿಯಾಜ್ ಅಹಮದ್ ಸಯೀದಿ ಮತ್ತು ಜೈನುಲ್ಲಾಬುದ್ದೀನ್ ಅವರನ್ನು ಖುಲಾಸೆಗೊಳಿಸಲಾಗಿತ್ತು. ಪ್ರಕರಣದ ಇತರ ಆರೋಪಿಗಳಾದ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಲಿಫ್ ಮತ್ತು ಸಮೀರ್ ತಲೆಮರೆಸಿಕೊಂಡಿದ್ದಾರೆ.

ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಉಗ್ರರು ಸ್ಫೋಟಕಗಳನ್ನು ಸಂಗ್ರಹಿಸುತ್ತಿರುವುದು ತಿಳಿದುಬಂದಿತ್ತು. ನಂತರ ಉಗ್ರರನ್ನು ಬಂಧಿಸಿದ ಪೊಲೀಸರು ಡಿಟೋನೇಟರ್ಗಳು, ಜಿಲೆಟಿನ್ ಸ್ಟಿಕ್ಗಳು, ಪೈಪ್ ಬಾಂಬ್ಗಳು, ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್ಗಳು, ಟೈಮರ್ಗಳು, ಗನ್ಪೌಡರ್ ಮತ್ತು ಬಾಂಬ್ಗಳಲ್ಲಿ ಬಳಸಲಾದ ಇತರ ವಸ್ತುಗಳು ಮತ್ತು ಯುಎಇಯ ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಸಂಚಿನ ಸಂಗತಿ ಬಯಲಾಗಿತ್ತು.

Leave a Reply