ಬಿಜೆಪಿಯವರು ಕನ್ನಡಿಗರಿಗೆ ಮಾಡುತ್ತಿರುವ ಮೋಸ, ಅನ್ಯಾಯ, ದ್ರೋಹದ ಲೆಕ್ಕವನ್ನು ಸರಿಯಾಗಿಯೇ ಚುಕ್ತಾ ಮಾಡಬೇಕಿದೆ: ದಿನೇಶ್ ಗುಂಡೂರಾವ್

2 years ago

ಬೆಂಗಳೂರು: ಇಷ್ಟು ದಿನ ಬರ ಪರಿಹಾರ ಬಗ್ಗೆ ಕೇಳಿದರೆ ನಮ್ಮ ಸರ್ಕಾರದ ಮೇಲೆಯೇ ಗೂಬೆ ಕೂರಿಸುತ್ತಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗ ಕೇಂದ್ರದಿಂದ ಬರ ಪರಿಹಾರ ವಿಳಂಬವಾಗಿದೆ ಎಂದು ತಾವೇ ಒಪ್ಪಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರು ಅವರು, ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬ ಉದ್ದೇಶಪೂರ್ವಕವಲ್ಲ, ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಲಿಲ್ಲ ಎಂದು ಹೇಳುವ ಮೂಲಕ ಎಲ್ಲಾ ತಪ್ಪನ್ನು ಚುನಾವಣಾ ಆಯೋಗದ ಹೆಗಲಿಗೆ ಹಾಕಿದ್ದಾರೆ ಎಂದಿದ್ದಾರೆ.

ಬರದಿಂದ ಬೇಯುತ್ತಿರುವ ಕನ್ನಡಿಗರ ನೆರವಿಗೆ ಬಾರದೇ ನಾಪತ್ತೆಯಾಗಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ ಬರ ಪರಿಹಾರ ವಿಳಂಬಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರವೇ ಹೊಣೆ ಎನ್ನುತ್ತಿದ್ದಾರೆ ಎಂದಿದ್ದಾರೆ.

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಅನ್ನುವಂತೆ ಸನ್ಮಾನ್ಯ ಅಶೋಕ್ ಅವರು ಮುಂಗಾರು ಅವಧಿಯ ಬರಗಾಲ ಘೋಷಣೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಸಕಾಲದಲ್ಲಿ ಮಾಡಿಲ್ಲ ಅನ್ನೋ ಹಸಿ ಹಸಿ ಸುಳ್ಳನ್ನು ಹೇಳುವ ಮೂಲಕ ಕೇಂದ್ರದ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಲಪಡಿಸಿದ್ದಾರೆ.

ರಾಜ್ಯದ ರೈತರಿಗೆ ಬರ ಪರಿಹಾರ ಕೊಡಿಸಲು ತಾಕತ್ತಿಲ್ಲದೇ ಕೇಂದ್ರ ಸರ್ಕಾರದ ಪರ ಮಾತನಾಡುತ್ತಿರುವ ಅಶೋಕ್ ಅವರು ಕನ್ನಡಿಗರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲಾ ರಾಜ್ಯಗಳಿಗಿಂತ ಮೊದಲೇ ಬರಗಾಲ ಘೋಷಣೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಕೇಂದ್ರ ಸರ್ಕಾರದ ಬಳಿ ಎಲ್ಲಾ ರಾಜ್ಯಗಳಿಗಿಂತ ಮೊದಲು ಬರಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇ ನಮ್ಮ ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು ಖುದ್ದು ದೆಹಲಿಗೆ ಹೋಗಿ ಅಮಿತ್ ಶಾಗೆ ಮನವಿ ಮಾಡಿ ಬಂದಿರುವುದು ನಿಮಗೆ ಗೊತ್ತಿಲ್ವಾ ಅಶೋಕ್ ಅವರೇ? ಎಂದು ಪ್ರಶ್ನಿಸಿದ್ದಾರೆ.

ನಿರ್ಮಲಾ ಸೀತಾರಾಮನ್, ಅಶೋಕ್ ಅಂತಹವರನ್ನು ಕನ್ನಡಿಗರು ಅಧಿಕಾರಕ್ಕೆ ತಂದಿರುವುದು ಹಾವಿಗೆ ಹಾಲೆರೆದಂತಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಎಚ್ಚೆತ್ತು ಬಿಜೆಪಿಯವರು ಕನ್ನಡಿಗರಿಗೆ ಮಾಡುತ್ತಿರುವ ಮೋಸ, ಅನ್ಯಾಯ, ದ್ರೋಹದ ಲೆಕ್ಕವನ್ನು ಸರಿಯಾಗಿಯೇ ಚುಕ್ತಾ ಮಾಡಬೇಕಿದೆ ಎಂದು ಕರೆನೀಡಿದ್ದಾರೆ.

Leave a Reply