ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ

3 years ago

#BhagyaJyoti #KutiraJyoti #AmritaJyoti #Schemes #merged #GrihaJyoti #Scheme #kjgoerge

ಅರ್ಧ ಕೋಟಿ ಕುಟುಂಬಗಳಿಗೆ ನೇರ ಲಾಭ ಮಾಡಿದ ಕೆ.ಜೆ.ಜಾರ್ಜ್ ನಿರ್ಧಾರ

ಬೆಂಗಳೂರು: ಇಂಧನ ಇಲಾಖೆಯ ಮೂಲಕ ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಈ ಮೂಲಕ ಇಂಧನ ಸಚಿವ ಕೆ.ಜೆ.ಜಾರ್ಜ್ ಕೇವಲ ಅರವತ್ತು ದಿನಗಳ ಅಧಿಕಾರಾವಧಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಪ್ರತಿ ಮನೆಗೂ ಬೆಳಕು ನೀಡುವ ದೃಷ್ಟಿಯಿಂದ ಈ ಹಿಂದೆ ಜಾರಿಗೊಳಿಸಲಾಗಿದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜೋತಿಯ ಲಾಭ ದಕ್ಕಲಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹ ಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ಮಾಸಿಕ ಸರಾಸರಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ ಅನ್ವಯವಾಗಿರುವ ಈ ಯೋಜನೆ ಜುಲೈ 1ರಿಂದಲೇ ಜಾರಿಗೆ ಬಂದಿದೆ. ಈ ನಡುವೆ, ಈಗಾಗಲೇ ಜಾರಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳ ಭವಿಷ್ಯವೇನು? ಇದರ ಫಲಾನುಭವಿಗಳಿಗೆ ಏನಾಗುತ್ತೆ? ಎನ್ನುವ ಪ್ರಶ್ನೆಗಳು ಕೇಳಲ್ಪಟ್ಟಿದ್ದವು. ಇದೀಗ ಇಂಧನ ಸಚಿವ ಕೆಜೆ ಜಾರ್ಜ್ ವಿಶೇಷ ಕಾಳಜಿ ವಹಿಸಿ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಈ ಎಲ್ಲಾ ಫಲಾನುಭವಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ

ಭಾಗ್ಯ ಜ್ಯೋತಿ ಕುಟುಂಬ ಜ್ಯೋತಿಗೆ ಈವರೆಗೆ 40 ಯೂನಿಟ್ ಫ್ರೀ ಇತ್ತು.ಈಗ ಅದನ್ನು 53 ಯೂನಿಟ್ ಹಾಗೂ 10% ಹೆಚ್ಚುವರಿ ಫ್ರೀ ಕರೆಂಟ್ ನೀಡುವುದಾಗಿ ಘೋಷಿಸಿದೆ. ಹಾಗೆಯೇ ಅಮೃತ ಜ್ಯೋತಿಗೆ 75 ಯೂನಿಟ್ ಇತ್ತು ಈಗ ಅದನ್ನು 75 ಯೂನಿಟ್ ಪ್ಲಸ್ 10% ಮಾಡಿದ್ದಾರೆ. ಈಗ ಎಲ್ಲರೂ ಗೃಹ ಜ್ಯೋತಿ ವ್ಯಾಪ್ತಿಗೆ ಬರುತ್ತಾರೆ. ಅವರಿಗೆ ಹೆಚ್ಚುವರಿ ಯೂನಿಟ್ ಗಳನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಮೂರು ಜ್ಯೋತಿಗಳ ಫಲಾನುಭವಿಗಳಲ್ಲಿ ಇದ್ದಂತಹ ಗೊಂದಲವನ್ನು ಇಂಧನ ಸಚಿವ ಕೆಜೆ ಜಾರ್ಜ್ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಇವರಿಗೂ ಹೆಚ್ಚುವರಿ ಫ್ರೀ ಕರೆಂಟ್ ನೀಡುವ ಮೂಲಕ ರಾಜ್ಯ ಸರ್ಕಾರ ಬಡ ಕುಟುಂಬಗಳ ನೆರವಿಗೆ ನಿಂತಿದೆ. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಇದರಿಂದ ನೇರ ಲಾಭ ಸಿಗಲಿದೆ.

Leave a Reply