ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್ ನಲ್ಲಿ ಕನಿಷ್ಠ 10 ಸಾವಿರ ಕೋಟಿ ರೂ. ಮೀಸಲಿಡಿ

1 year ago

ಅಲ್ಪಸಂಖ್ಯಾತ ಶಾಸಕರು ಸಚಿವರ ಸಹಿತ ಅಲ್ಪಸಂಖ್ಯಾತ ಮತಗಳನ್ನು ಪಡೆದು ಗೆದ್ದು ಬಂದಿರುವ ಎಲ್ಲಾ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಲಿ: ಅಪ್ಸರ್ ಕೊಡ್ಲಿಪೇಟೆ

ಬಾಗಲಕೋಟೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಬ್ದುಲ್ ಖಾದರ್ ಜಮಾದಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಬಾದಾಮಿ ನಗರದ ಪ್ರತಿಷ್ಠಿತ ವಕ್ಫ್ ಸಂಸ್ಥೆ ಅಂಜುಮಾನ್ ಇಸ್ಲಾಂ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ 10  ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿಲ್ಲ ಎಂದು ಆರೋಪಿಸಿದರು.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಲಾಗಿದ್ದು, ಮುಂದಿನ ಬಜೆಟ್ ನಲ್ಲಿ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲು ಅಲ್ಪಸಂಖ್ಯಾತ ಶಾಸಕರು ಸಚಿವರ ಸಹಿತ ಅಲ್ಪಸಂಖ್ಯಾತ ಮತಗಳನ್ನು ಪಡೆದು ಗೆದ್ದು ಬಂದಿರುವ ಎಲ್ಲಾ ಕಾಂಗ್ರೆಸ್ ನ ಶಾಸಕರುಗಳು ಸರ್ಕಾರದ ಮೇಲೆ ಒತ್ತಡ ಹೇರಲು ಆಗ್ರಹಿಸಿದರು.

ರಾಜ್ಯದ ಬೊಕ್ಕಸದ 168 ಕೋಟಿ ಖರ್ಚು ಮಾಡಿ ತಯಾರಿಸಿರುವ ಜಾತಿ ಜನಗಣತಿ (ಕಾಂತರಾಜ್ ವರದಿ ) ವರದಿಯಲ್ಲಿ  ಕರ್ನಾಟಕ ರಾಜ್ಯದ ಎಲ್ಲಾ ಜಾತಿಗಳ ಆರ್ಥಿಕ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕ ಅಂಶಗಳಿವೆ. ವರದಿಯಲ್ಲಿ ಎಸ್ಸಿ , ಎಸ್ ಟಿ ಮತ್ತು ಮುಸ್ಲಿಮರಿಗೆ ಅವರ ಜನಸಂಖ್ಯಾವಾರು ಸಿಗಬೇಕಾದ ಮೀಸಲಾತಿ ಮತ್ತು ಸೌಲಭ್ಯಗಳಿಗೆ ಇಲ್ಲಿನ ಶಾಸಕರು ಮತ್ತು ಅವರ ಪಟಾಲಂ ವರದಿ ಬಿಡುಗಡೆ ಮಾಡದಂತೆ ಸರ್ಕಾರದ ಮೇಲೆ ಪ್ರಭಾವ ಬೀರಿ ಅವರಿಗೆ ಅವರ ಹಕ್ಕುಗಳು ದೊರಕದಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಬಜೆಟ್ ಅಧಿವೇಶನಕ್ಕೂ ಮುನ್ನ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
    
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಆಬೀದ್ ಮೊಮಿನ್, ಬಾದಾಮಿ ವಿಧಾನ ಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಬಷೀರ್ ಅತ್ತಾರ್, ಕಾರ್ಯದರ್ಶಿ ಸುಹೆಲ್ ದಡವಾಡ ಸಹ ಕಾರ್ಯದರ್ಶಿ ಪೀರ್ ಪಾಷಾ ಜೋಲಂದಾಜ ಕೋಶಾಧಿಕಾರಿಯಾದ ಮೋಹಿದೀನ್ ಭಾಗವಾನ್ ಮತ್ತು ಕಾರ್ಯಕರ್ತರು ಹಾಜರಿದ್ದರು.

Leave a Reply