ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ೧೦೬ನೆಯ ಹಾಗೂ ೨೦೨೧-೨೨ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಾರ್ಚ್ ೨೬ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ವಿಜಯಪುರ ಜಿಲ್ಲೆಯ ವಿಜಯಪುರದ ಸ್ಟೇಷನ್ ರಸ್ತೆಯಲ್ಲಿರುವ ʻಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರʼದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ವಹಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ೧೦೬ನೆಯ ಹಾಗೂ ೨೦೨೧-೨೨ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದಿನಾಂಕ ೧-೫-೨೦೨೨ ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯ ನಡೆವಳಿಗಳ ದೃಢೀಕರಣಗೊಳಿಸುವುದು, ೨೦೨೧-೨೨ನೆಯ ಸಾಲಿನ ಲೆಕ್ಕಪರಿಶೋಧಿತವಾದ (ಆಡಿಟ್ ಆದ) ವಾರ್ಷಿಕ ಲೆಕ್ಕ ಪತ್ರಗಳ ಮಂಡನೆಮಾಡುವುದು, ೨೦೨೨-೨೩ರ ಸಾಲಿನ ವಾರ್ಷಿಕ ಆಯವ್ಯಯದ ಕುರಿತು ಚರ್ಚಿಸಿ ವಾರ್ಷಿಕ ಸಾಮಾನ್ಯ ಸಭೆಯ ಅನುಮೋದಿಸುವ ಬಗ್ಗೆ ಮಂಡಿಸುವುದು, ೨೦೨೨-೨೩ರ ಸಾಲಿನ ಹಣಕಾಸಿನ ವರ್ಷಕ್ಕೆ ಲೆಕ್ಕಪರಿಶೋಧಕರ ನೇಮಕಾತಿ ಮತ್ತು ಅವರ ಸಂಭಾವನೆ ನಿಗದಿಪಡಿಸುವುದು, ೨೦೨೨-೨೩ನೇ ಸಾಲಿನ ಕ್ರಿಯಾಯೋಜನೆಗಳಿಗೆ ತಗಲುವ ವೆಚ್ಚಕ್ಕೆ ಅನುಮೋದನೆ ನೀಡುವುದು, ಸದಸ್ಯರ ವಿರುದ್ಧ ಶಿಸ್ತು ವಿಚಾರಣಾ ವರದಿಗಳನ್ನು ಮಂಡಿಸುವುದು, ೨೦೨೨-೨೩ರ ಸಾಲಿನ ಕಾರ್ಯಕಾರಿ ಸಮಿತಿಯು ತಯಾರಿಸಿದ ಪರಿಷತ್ತಿನ ಕಾರ್ಯಚಟುವಟಿಕೆಗಳ ಯೋಜನೆಗಳ ಮಂಡಿಸುವುದು, ಸದಸ್ಯರು ನಿಯಮಾನುಸಾರವಾಗಿ ಕಳುಹಿಸಿರುವ ಇತರೆ ಸೂಚನೆಗಳ ಬಗ್ಗೆ ಚರ್ಚಿಸುವುದು ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸಬಹುದಾದ ಇನ್ನಿತರೆ ವಿಷಯಗಳ ಕುರಿತು ೨೦೨೧-೨೦೨೨ ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ ʻʻಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿ ವಾರ್ಷಿಕ ಸಾಮಾನ್ಯ ಸಭೆಯ ಕುರಿತು ಪ್ರಕಟಣೆಯನ್ನು ಪರಿಷತ್ತು ಪ್ರಕಟಿಸುವ ಕನ್ನಡ ನುಡಿ* ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಸರ್ವ ಸದಸ್ಯರಿಗೂ ನೀಡಲಾಗುತ್ತಿತ್ತು. ಆದರೆ ಈ ಬಾರಿ ʻಕನ್ನಡ ಸಾಹಿತ್ಯ ಪರಿಷತ್ತಿನ ನಿಯಮ-ನಿಬಂಧನೆ (೩೦) ಪ್ರಕಾರʼ ಪರಿಷತ್ತಿಗೆ ಆಗುವ ಆರ್ಥಿಕ ಹೊರೆ ತಪ್ಪಿಸುವ ಹಾಗೂ ಪರಿಷತ್ತಿನಲ್ಲಿ ಕಾಗದ ರಹಿತ ಆಡಳಿತ ಮಾಡಿರುವ ಹಿನ್ನೆಲೆಯಲ್ಲಿ ೨೦೨೧-೨೦೨೨ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಪ್ರಕಟಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ಮೂಲಕ, ಆಪ್ನ ಮೂಲಕ, ಪರಿಷತ್ತಿನ ಎಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಲಾಗುತ್ತಿದೆ ಎಂದರು.
ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಸೇರಿದಂತೆ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಅಸ್ತಿತ್ವದಲ್ಲಿರುವ ಹೋಬಳಿ ಹಾಗೂ ಗಡಿನಾಡು ಘಟಕಗಳ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನಾಗಿಸುವ ನಿಟ್ಟಿನಲ್ಲಿ ಹಲವಾರು ತಂತ್ರಜ್ಞಾನವನ್ನು ಬಳಸುವ ಮೂಲಕ ಸಾಮಾನ್ಯ ಜನರು ಸಹ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಮನಿಸಿ ಸಕ್ರಿಯವಾಗಿ ಭಾಗವಹಿಸಬೇಕು, ಎನ್ನುವುದು ಪರಿಷತ್ತಿನ ಉದ್ದೇಶವಾಗಿದೆ. ಇದರ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕದ ಕುರಿತು ಸಕಾರಾತ್ಮಕ ಚಿಂತನೆ ಮಾಡುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ೧೦೬ನೆಯ ಹಾಗೂ ೨೦೨೧-೨೨ನೆಯ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು ತಮ್ಮ ಅಭಿಪ್ರಾಯ ಸೂಚಿಸಬೇಕೆಂದು” ಕೋರಿದ್ದಾರೆ.




