ಜೈಲು ಪಾಲಾದ ನಟ ದರ್ಶನ್ ಮತ್ತು ಸಹಚರರು

2 years ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ 12 ಸಹಚರರು ತಮ್ಮ ಅಪ್ಪಟ ಅಭಿಮಾನಿಯನ್ನೇ ಕೊಲೆ ಮಾಡಿಸಿದ ಆರೋಪದಲ್ಲಿ ಜೈಲು ಸೇರಿದ್ದಾರೆ. ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಕಳಿಸಿದ ಆರೋಪದಲ್ಲಿಕೊಲೆಯಾಗಿರುವ ರೇಣುಕಾಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಎನ್ನುವುದು ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಚಿತ್ರದುರ್ಗದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದ ರೇಣುಕಾಸ್ವಾಮಿ ಅಪೊಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಜೂ.8ರಂದು ಮನೆಯಿಂದ ಹೊರಟವರು ವಾಪಸ್ ಬಂದಿರಲಿಲ್ಲ.

ಈ ಬಗ್ಗೆ ಕುಟುಂಬದವರಿಗೆ ಆತಂಕ ಎದುರಾಗಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವುದಾಗಿ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದರು.

ಜೂನ್ 9ರಂದು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ಅನುಗ್ರಹದ ಸೆಕ್ಯೂರಿಟಿ ಅಧಿಕಾರಿ ಕೇವಲ್ ರಾಮ್ ದೋರ್ ಜೀ ಎಂಬುವರು ಪೊಲೀಸರಿಗೆ ಕರೆ ಮಾಡಿ, ಮೋರಿಯ ಮುಂದೆ 30-35 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು.

ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮೃತ ದೇಹದ ಮುಖ, ತಲೆಗೆ ಹಾಗೂ ಕಿವಿಗೆ ಗಾಯವಾಗಿರುವುದು ಕಂಡುಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆ ಕೈಗೊಂಡು ಮೊಬೈಲ್ ನೆಟ್ವರ್ಕ್ ನೀಡಿದ ಸೂಚನೆ ಆಧರಿಸಿ ಕೆಲವರನ್ನು ಬಂಧಿಸಿದ್ದರು. ಬಂಧಿತರು ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಈ ಕೊಲೆಯನ್ನು ಅವರು ನಟ ದರ್ಶನ್ ಸೂಚನೆ  ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದರು.

ಕೊಲೆಯಾದ ರೇಣುಕಾಸ್ವಾಮಿ ಮಾಡಿದ್ದೇನು?: ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೇಸೆಜ್, ಫೋಟೋ ಹಾಕಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ದರ್ಶನ್ ಹಾಗೂ ಇನ್ನೂ ಕೆಲವರು ಸೇರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಲಿಯಾದವ ಕೂಡ ದರ್ಶನ್ ಅಭಿಮಾನಿ: ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ನ ಅಪ್ಪಟ ಅಭಿಮಾನಿಯಾಗಿದ್ದ. ದರ್ಶನ್, ಇದೀಗ ಪವಿತ್ರ ಗೌಡ ಅವರಿಂದಾಗಿ ದರ್ಶನ್ ಮತ್ತುವಿಜಯಲಕ್ಷ್ಮೀ ಅವರ ಸಂಸಾರ ಬಗ್ಗೆ ಯೋಚನೆ ಮಾಡಿದ್ದ ಆತ ಅವರ ಸಂಸಾರದಲ್ಲಿ ಪವಿತ್ರಾಗೌಡ ಬರುತ್ತಿದ್ದಾರೆಂದು ತಿಳಿದು ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಎನ್ನಲಾಗಿದೆ.

ತಮಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಮೆಸೇಜ್ ಹಾಕುವ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ಪವಿತ್ರ ಗೌಡ ನಟ ದರ್ಶನ್ ಗೆ ದೂರು ನೀಡಿದ್ದರು. ಇದನ್ನು ಆಧರಿಸಿ ನಟ ದರ್ಶನ್ ತಮ್ಮ ಹುಡುಗರಿಗೆ ರೇಣುಕಾ ಸ್ವಾಮಿಗೆ ಬುದ್ಧಿ ಕಲಿಸುವಂತೆ ಹೇಳಿದ್ದರು. ಅದರಂತೆ ರೇಣುಕಾಸ್ವಾಮಿಯನ್ನು ಹಿಡಿದುಕೊಂಡು ಬಂದಿದ್ದ ದರ್ಶನ್ ಅವರ ಹುಡುಗರು ಸುಮನಹಳ್ಳಿಯ ಸತ್ವ ಅಪಾರ್ಟ್ಮೆಂಟ್ ಬಳಿ ಹಲ್ಲೆ ನಡೆಸಿದ್ದರು. ಈ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು.

Leave a Reply