ಬೆಂಗಳೂರು: ರೇಷ್ಮೆ ನಗರಿ ರಾಮನಗರ ಜೆಡಿಎಸ್ ನ ಭದ್ರಕೋಟೆ ಅಷ್ಟೇ ಅಲ್ಲ ಅದೃಷ್ಟದ ಕ್ಷೇತ್ರವೂ ಆಗಿದೆ.ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾದ ದೇವೇಗೌಡ, ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದರು. ಹೀಗಾಗಿ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದಲ್ಲಿ ದೊಡ್ಡ ಪೈಪೋಟಿ ಇದೆ.
ರಾಮನಗರ ಜಿಲ್ಲೆಯ ಕೇತಮಾರನಹಳ್ಳಿಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ಈ ಕ್ಷೇತ್ರವನ್ನು ತಮ್ಮ ಕರ್ಮ ಭೂಮಿ ಎಂದು ಪರಿಗಣಿಸಿದೆ.ಕಳೆದ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆಯಾಗಿದ್ದ ಕುಮಾರಸ್ವಾಮಿ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆನಂತರ ನಡೆದ ಉಪ ಚುನಾವಣೆ ಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಆಯ್ಕೆಯಾದರು.
ಇದೀಗ ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಪ್ರವರ್ಧಮಾನಕ್ಕೆ ತರಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ಕುಮಾರಸ್ವಾಮಿ ಅವರನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇಷ್ಟಾದರೂ ಅವರು ಈ ಕ್ಷೇತ್ರದಿಂದ ಕಣಕ್ಕೆ ಇಳಿಯುವುದು ಅನುಮಾನವಾಗಿದೆ.
ಈ ಹಿಂದೆ ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು, ಆಗ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.ಕಾಂಗ್ರೆಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಿರಲಿಲ್ಲ. ಹೀಗಿದ್ದರೂ ನಿಖಿಲ್ ಸೋಲು ಅನುಭವಿಸಿದ್ದರು.ಇದನ್ನು ದೇವೇಗೌಡರ ಕುಟುಂಬ ಅಶುಭ ಎಂದೇ ಭಾವಿಸಿದೆ. ಹೀಗಾಗಿ ಈ ಬಾರಿ ಇಂತಹ ಅಪ ಶಕುನವಾಗಬಾರದು ಎಂದು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಶೃಂಗೇರಿ ಶಾರದಾ ಪೀಠದ ಅರ್ಚಕರು ನಿಖಿಲ್ ಅವರ ತೋಟದ ಮನೆಯಲ್ಲಿ ಪೂಜೆ,ಹೋಮ ಹವನಗಳಲ್ಲಿ ತೊಡಗಿದ್ದಾರೆ. ಖ್ಯಾತ ಜ್ಯೋತಿಷಿಗಳ ಸಲಹೆಯ ಮೇರೆಗೆ ಈ ಪೂಜೆ ನಡೆಯುತ್ತಿದೆ.ಈ ಜ್ಯೋತಿಷಿಗಳ ತಂಡ ಇನ್ನೂ ನಿಖಿಲ್ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ ನಿಖಿಲ್ ಕ್ಷೇತ್ರದಲ್ಲಿ ಪ್ರಚಾರದ ಅಖಾಡಕ್ಕೆ ಸಕ್ರಿಯವಾಗಿ ತೊಡಗಿಲ್ಲ. ಜ್ಯೋತಿಷಿಗಳ ಹಸಿರು ನಿಶಾನೆಗೆ ಕಾಯುತ್ತಿದ್ದು ಅದು ಬಂದರಷ್ಟೇ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಲಿದೆ.




