ಫೆ. 10ರಿಂದ ಉಭಯ ಸದನಗಳ ಅಧಿವೇಶನ

3 years ago

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಫೆ.10ರಂದು ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಭಯ ಸದನಗಳ ಸದಸ್ಯರನ್ನುದೇಶಿಸಿ ಭಾಷಣ ಮಾಡಲಿದ್ದಾರೆ.

ಫೆ.13ರಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಅಧಿಕೃತ ಕಾರ್ಯಕಲಾಪಗಳು ಫೆ. 16ರವರೆಗೂ ನಡೆಯಲಿವೆ. ಈ ಸಂದರ್ಭದಲ್ಲಿ ಪ್ರಶ್ನೋತ್ತರ ಸೇರಿದಂತೆ ಅಧಿಕೃತ ಕಾರ್ಯಕಲಾಪಗಳ ಜತೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ಚರ್ಚೆಗೆ ಸರ್ಕಾರ ಉತ್ತರ ನೀಡಿದ ಬಳಿಕ ವಂದನಾ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಗುವುದು.

ಫೆ.17ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಚುನವಣಾ ವರ್ಷವಾಗಿರುವುದರಿಂದ ಮುಖ್ಯಮಂತ್ರಿಗಳು ಜನಪ್ರಿಯ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಘೋಷಣೆಗಳನ್ನು ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಫೆ.10ರಂದು ಅಧಿವೇಶನ ಪ್ರಾರಂಭವಾಗಿ ಫೆಬ್ರವರಿ ಅಂತ್ಯದವರೆಗೂ ಅಧಿವೇಶನ ನಡೆಯುವ ಸಾಧ್ಯತೆಗಳಿವೆ. ಬಜೆಟ್ ಮಂಡನೆ ಬಳಿಕ ಉಭಯ ಸದನಗಳಲ್ಲಿ ಬಜೆಟ್ ಮೇಲೆ ಸುದೀರ್ಘ ಚರ್ಚೆ ನಡೆಯಲಿದೆ. ಬಳಿಕ ಸರ್ಕಾರ ಶಾಸಕರು ಮಾಡಿದ ಚರ್ಚೆಗೆ ಉತ್ತರ ನೀಡಲಿದೆ. ಆ ನಂತರ ಉಭಯ ಸದನಗಳಲ್ಲಿ ಮುಂಗಡ ಪತ್ರಕ್ಕೆ ಅನುಮೋದನೆ ಪಡೆಯುವುದು ವಾಡಿಕೆ.

ಚುನಾವಣಾ ವರ್ಷದಲ್ಲಿ ಪೂರ್ಣ ಪ್ರಮಾಣದ ಆಯವ್ಯಯ ಮಂಡಿಸದೇ ಜೂನ್ ಅಂತ್ಯದವರೆಗೆ ಲೇಖಾನುದಾನ ಪಡೆಯುವ ಸಂಪ್ರದಾಯವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದೆ.

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗುತ್ತಿವೆ. ಪ್ರತಿಪಕ್ಷಗಳ ವಾಗ್ದಾಳಿ ಎದುರಿಸಲು ಆಡಳಿತ ಪಕ್ಷವೂ ಸಿದ್ಧವಾಗುತ್ತಿದೆ. ಒಟ್ಟಾರೆ ಈ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

Leave a Reply