ಸಾವರ್ಕರ್ ಭಾವಚಿತ್ರ ಅನಾವರಣ: ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ

4 years ago

ಬೆಳಗಾವಿ: ಸುವರ್ಣ ಸೌಧದ ವಿಧಾನಸಭೆಯಲ್ಲಿ ಸಾವರ್ಕರ್ ಸೇರಿದಂತೆ ಅನೇಕ ಮಹನೀಯರ ಭಾವಚಿತ್ರ ಅಳವಡಿಸುವ ವಿಷಯ ಇದೀಗ ವಿವಾದವಾಗಿ ಪರಿಣಮಿಸಿದೆ.

ಪ್ರತಿಪಕ್ಷ ಸದಸ್ಯರ ವಿರೋಧದ ನಡುವೆಯೂ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ ಮತ್ತಿತರರು ಭಾವಚಿತ್ರಗಳನ್ನು ಅನಾವರಣಗೊಳಿಸಿದರು.

ಸಭಾಧ್ಯಕ್ಷರ ಆಸನದ ಮೇಲ್ಭಾಗದಲ್ಲಿ ಒಟ್ಟು ಏಳು ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಮಧ್ಯಭಾಗದಲ್ಲಿ ಜಗಜ್ಯೋತಿ ಬಸವಣ್ಣ, ಎಡಭಾಗದಲ್ಲಿ ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಡಾ.ಬಿ.ಆರ್. ಅಂಬೇಡ್ಕರ್, ಬಲಭಾಗದಲ್ಲಿ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಸಾರ್ವಕರ್ ಸೇರಿದಂತೆ ಏಳು ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರ್ಧಾರ ವಿರೋಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮೊದಲ ದಿನದ ಕಲಾಪ ಆರಂಭಕ್ಕೂ ಮುನ್ನ ಸುವರ್ಣಸೌಧದ ಮುಂಭಾಗ  ಕಾಂಗ್ರೆಸ್ ಸದಸ್ಯರು, ಮಹಾತ್ಮ ಗಾಂಧಿ, ನೆಹರು ಸೇರಿದಂತೆ ಹಲವು ರಾಷ್ಟ್ರನಾಯಕರ ಭಾವಚಿತ್ರಗಳನ್ನು ಹಿಡಿದು ಧರಣಿ ನಡೆಸಿದರು. ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಸೇರಿ ಹಲವು ಮಹನೀಯರ ಭಾವಚಿತ್ರ ಅಳವಡಿಸಬೇಕು ಎಂದು ಆಗ್ರಹಿಸಿದರು.

ಸಾವರ್ಕರ್ ಸೇರಿದಂತೆ ಯಾವುದೇ ಭಾವಚಿತ್ರ ಅಳವಡಿಸಲು ನಮ್ಮ ವಿರೋಧವಿಲ್ಲ. ಆದರೆ ಸಭಾಧ್ಯಕ್ಷರು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ಕೈಗೊಂಡ ನಿರ್ಧಾರ ವಿರೋಧಿಸಿ ನಮ್ಮ ಪ್ರತಿಭಟನೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್, ನಾರಾಯಣಗುರು, ಜ್ಯೋತಿ ಬಾಪುಲೆ, ವಲ್ಲಭಬಾಯಿ ಪಟೇಲ್, ಕನಕದಾಸ, ನೆಹರೂ, ಬಾಬು ಜಗಜೀವನ್ರಾಮ್, ಕುವೆಂಪು, ಶಿಶುನಾಳ ಶರೀಫ, ಬಸವಣ್ಣ, ಕನಕದಾಸ ಮುಂತಾದ ವಿಚಾರವಂತರು ಹಾಗೂ ರಾಷ್ಟ್ರ ನಾಯಕರುಗಳು ಭಾರತದ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ, ಆದರ್ಶಗಳು ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ. ಅವರುಗಳ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸರ್ಕಾರ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಮರೆತಿದೆ. ಇಲ್ಲಿ ಅನೇಕ ಘಟನೆಗಳು ನಡೆದಿವೆ. ಇವುಗಳ ಬಗ್ಗೆ ಚರ್ಚೆಯಾಗಬಾರದು. ಸರ್ಕಾರದ ವೈಫಲ್ಯಗಳು ಗೊತ್ತಾಗಬಾರದೆಂದು ದಾರಿ ತಪ್ಪಿಸಲು ಸಾವರ್ಕರ್‌ ಫೋಟೋ ಅಳವಡಿಕೆ ವಿಚಾರ ಮುಂದೆ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ನನಗೆ ಸಭಾದ್ಯಕ್ಷರ ಕಚೇರಿಯಿಂದ ಕರೆ ಬಂದಿತ್ತು. ಅಂಬೇಡ್ಕರ್ ಗಾಂಧೀಜಿ ಫೋಟೊ‌ ಅನಾವರಣ ಮಾಡುವುದಾಗಿ ಹೇಳಿದ್ದರು. ಆದರೆ, ಮಾಧ್ಯಮದ ಮೂಲಕ ಸಾವರ್ಕರ್ ಫೋಟೊ ಅನಾವರಣ ಮಾಡುತ್ತಿರುವುದು ಗೊತ್ತಾಯಿತು. ಸಾವರ್ಕರ್ ವಿವಾದಾಸ್ಪದ ವ್ಯಕ್ತಿಯಾಗಿದ್ದಾರೆ. ಕರ್ನಾಟಕಕ್ಕೂ ಸಾವರ್ಕರ್ ಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

Leave a Reply