ಮಕ್ಕಳ ದಿನಾಚರಣೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

3 years ago

ಸರ್ಕಾರಿ ಶಾಲೆ ನನ್ನ ಶಾಲೆ ಎಂದು ಅಭಿಮಾನ ಬೆಳಸಿಕೊಂಡು, ಸಹಕಾರ ನೀಡಿ: ನಟ, ನಿರ್ದೇಶಕ ಎಸ್.ನಾರಾಯಣ್

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ನ ಕಮಲಾ ನಗರದಲ್ಲಿರುವ ಗಂಗಾಧರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.

ನಟ, ನಿರ್ದೇಶಕ ಎಸ್.ನಾರಾಯಣ್, ಎಮ್.ಶಿವರಾಜು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸೋಮಶೇಖರ್ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ನಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.

ಎಸ್.ನಾರಾಯಣ್ ಮಾತನಾಡಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರವರು ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಾರೆ. ಮನುಷ್ಯನಾಗಿ, ಸಂಸ್ಕೃತಿ ಸಂಪ್ರಾದಯ ಪ್ರಕಾರ ಜೀವನ ಸಾಗಿಸಬೇಕಾದರೆ ವಿದ್ಯೆ ಬೇಕು. ವಿದ್ಯೆ ಕಲಿತರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಪ್ರಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರು ಸ್ವಾತಂತ್ರ್ಯ ಹೋರಾಟಗಾರರು ಎಂದರು.

ಮಕ್ಕಳು ದೇಶದ ಭವಿಷ್ಯ ಎಂದು ನೆಹರೂರವರು ಕರೆದರು. ಮಕ್ಕಳು ಪ್ರೀತಿಯಿಂದ ನೆಹರೂರವರನ್ನು ಚಾಚ ಎಂದು ಕರೆಯುತ್ತಿದ್ದರು. ಸರ್ಕಾರಿ ಶಾಲೆ ಉಳಿಯಬೇಕು ಎಂದರೆ ಪ್ರತಿಯೊಬ್ಬ ನಾಗರಿಕನು ನನ್ನ ಶಾಲೆ ಎಂದು ಅಭಿಮಾನ ಬೆಳಸಿಕೊಂಡು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕರೆನೀಡಿದರು.

ಎಮ್.ಶಿವರಾಜು ಮಾತನಾಡಿ, ಮಕ್ಕಳಿಗೆ ಶಿಕ್ಷಣ ಮುಖ್ಯ, ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು. ಶ್ರೀಮಂತರ ಮಕ್ಕಳಿಗೆ ಸಿಗುವ ಹೈಟೆಕ್ ಸೌಲಭ್ಯಗಳು, ಸರ್ಕಾರಿ, ಬಿ.ಬಿ.ಎಂ.ಪಿ.ಯ ಶಾಲೆಯ ಮಕ್ಕಳಿಗೆ ತಂತ್ರಜ್ಞಾನ ಸೌಲಭ್ಯ ಸಿಗಬೇಕು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರವರು ಭಾರತದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಮಹದೇವಪ್ಪ ಪ್ರತಿಷ್ಠಾನ ಮತ್ತು ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸಹಯೋಗದಿಂದ ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇಂದಿನ ಮಕ್ಕಳು ಭವಿಷ್ಯದ ಭಾರತ ನಿರ್ಮಾಣ ಮಾಡುವ ಸೇನಾನಿಗಳಾಗಿ ದೇಶ ಸೇವೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

Leave a Reply