ಕಾಂಗ್ರೆಸ್ ಸರ್ಕಾರ ನಾಮಾವಶೇಷವಾಗಲಿದೆ: ವಿ ಸೋಮಣ್ಣ

8 months ago

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ನಿಶ್ಚಿತ. ಈ ವೇಳೆ ಕೆಲವು ಕಾಂಗ್ರೆಸ್ಸಿಗರಿಗೆ ವಾಂತಿಯಾಗಲಿದೆ. ಅಷ್ಟೇ ಅಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ನಾಮಾವಶೇಷವಾಗಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಮಂತ್ರಿ ವಿ ಸೋಮಣ್ಣ ಭವಿಷ್ಯ ನುಡಿದಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಮುದಾಯವನ್ನು ಓಲೈಕೆ ಮಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ತೀರ್ಮಾನಗಳು ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುತ್ತಿವೆ. ನಾಡ ಹಬ್ಬ ಉದ್ಘಾಟನೆ ವಿಚಾರದಲ್ಲೂ ಓಲೈಕೆ ಮಾಡುತ್ತಿರುವ ವಿಚಾರ ಅತ್ಯಂತ ಬೇಸರ ತರಿಸಿದೆ. ಇದಕ್ಕಾಗಿ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದರು.

ತಾವೊಬ್ಬ ರಾಜಕಾರಣಿ, ಸಕ್ರಿಯ ರಾಜಕಾರಣದಿಂದ ನಿವೃತ್ತಾರಾಗುವ ಪ್ರಶ್ನೆ ಇಲ್ಲ. ಆದರೆ, ಮುಂಬರುವ ಲೋಕಸಭಾ ಚುನಾವಣೆಯನ್ನು ತುಮಕೂರು ಲೋಕಸಭಾ ಕ್ಷೇತ್ರ ಅಥವಾ ತುಮಕೂರಿಗೆ ಸಂಬಂಧಪಟ್ಟ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಇದನ್ನೇ ಕೆಲವರು ತಾವು ರಾಜಕೀಯ ನಿವೃತ್ತಿಯಾಗುವುದಾಗಿ ಬಿಂಬಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಹಿರಿಯ ನಾಯಕರಾದ ಅಮಿತ್ ಶಾ ಅವರು ತಮ್ಮ ಮನೆಗೆ ಬಂದು ಎರಡು ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸಲು ಸೂಚಿಸಿದರು. ಅವರ ಸಲಹೆಯಂತೆ ಎರಡು ಕಡೆ ಸ್ಪರ್ಧೆ ಮಾಡಿ ಸೋಲು ಅನುಭವಿಸಿದೆ. ಆನಂತರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಟಿಕೆಟ್ ನೀಡಿದರು. ಇಲ್ಲಿಂದ ಆಯ್ಕೆಯಾದ ತಮಗೆ ಮಂತ್ರಿ ಸ್ಥಾನ ನೀಡಿದ್ದಾರೆ ಎಂದರು.

ತಮಗೆ ಹಿಂದಿ ಮತ್ತು ಇಂಗ್ಲಿಷ್ ಬರುವುದಿಲ್ಲ ಎಂದು ಮಂತ್ರಿ ಸ್ಥಾನ ಒಪ್ಪಿಕೊಳ್ಳಲು ಹಿಂಜರಿದೆ. ಆದರೆ ಪ್ರಧಾನಿ ಮತ್ತು ಅಮಿತ್ ಶಾ ಅವರು ಭಾಷೆಗಿಂತ ಸಾಮಾನ್ಯ ಜ್ಞಾನ ಮುಖ್ಯ ಎಂದು ಹೇಳಿ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ನೀಡಿದ್ದಾರೆ. ಎರಡು ಇಲಾಖೆಗಳಿಂದ ತುಮಕೂರಿಗೆ 49,000 ಕೋಟಿ ಮೊತ್ತದ ಯೋಜನೆಗಳನ್ನು ಮಂಜೂರು ಮಾಡಿದ್ದೇನೆ ಎಂದರು.

ತುಮಕೂರು ಭಾಗದಲ್ಲಿ ತೆಂಗಿಗೆ ತಗಲಿರುವ ರೋಗಬಾಧೆ ನಿವಾರಣೆ ಮತ್ತು ಪರಿಹಾರ ಸಂಬಂಧ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಚಿಸಿರುವ ತಜ್ಞರ ಸಮಿತಿ ನಾಳೆ ವರದಿ ನೀಡಲಿದೆ. ಅದರ ಆಧಾರದಲ್ಲಿ ಪರಿಹಾರ ಕಾಮಗಾರಿಗಳನ್ನು ಕಾರ್ಯಗೊಳಿಸಲಾಗುವುದು ಎಂದರು.

ಬೆಂಗಳೂರನ್ನು ಕೇಂದ್ರೀಕರಿಸಿಕೊಂಡು ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ನಾಳೆ ಈ ಸಂಬಂಧ ಕಾರ್ಯಯೋಜನೆ ಪ್ರಕಟಿಸಲಾಗುವುದು. ಈ ಮೂಲಕ ತಮಗೆ ದೊರೆತಿರುವ ಅವಕಾಶ ಬಳಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಆ ಹುದ್ದೆ ಖಾಲಿ ಇಲ್ಲ. ಅಲ್ಲದೆ ಒಳ್ಳೆಯ ಕೆಲಸ ಮಾಡಿದವರಿಗೆ ಸದಾ ಒಳ್ಳೆಯದೇ ಆಗುತ್ತದೆ ಎನ್ನುವುದು ನನ್ನ ನಂಬಿಕೆ. ಅದಕ್ಕೆ ನಾನೇ ಉದಾಹರಣೆ. ಹೀಗಾಗಿ ತಮಗೆ ಒಳ್ಳೆಯದೇ ಆಗಲಿದೆ ಎಂದರು.

Leave a Reply