ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ: ವಿ.ಸುನಿಲ್‌ ಕುಮಾರ್‌

8 months ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಬಿಜೆಪಿಯ ಸದಸ್ಯ ವಿ.ಸುನಿಲ್‌ ಕುಮಾರ್‌ ಹೇಳಿದರು.

ವಿಧಾನಸಭೆಯಲ್ಲಿ  ನಿಯಮ 69ರ ಅಡಿ ಅನುದಾನ ತಾರತಮ್ಯದ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಇದು ಇಲ್ಲಗಳ ಸರ್ಕಾರ. ಯಾವುದೇ ಅಭಿವೃದ್ಧಿ ಇಲ್ಲದೆ ಇದ್ದರೂ ಸಾಧನ ಸಮಾವೇಶ ಮಾಡುತ್ತಿದ್ದಾರೆ. ಭ್ರಷ್ಟಾಚಾರ ವ್ಯಾಪಕವಾಗಿದೆ ಗ್ಯಾರೆಂಟಿ ಯೋಜನೆಗಳಿಂದ 63 ಸಾವಿರ ಕೋಟಿ ರೂ. ಸಾಲ ಹೆಚ್ಚಾಗಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ. ಆಸ್ತಿಗಳ ಸೃಜನೆಯಾಗುತ್ತಿಲ್ಲ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ 400 ಕೋಟಿ ರೂ.ಗಳ ಅನುದಾನ ಇತ್ತು. ಅದನ್ನು ಸಮಾನಾಂತರವಾಗಿ ಹಂಚುವ ಬದಲಾಗಿ ವಿಧಾನಸಭಾಧ್ಯಕ್ಷರ ಕ್ಷೇತ್ರದಲ್ಲಿ 250 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸೇತುವೆ ನಿರ್ಮಿಸಲಾಗುತ್ತಿದೆ. ಇದು ನನ್ನ ಸ್ವಾರ್ಥಕ್ಕಾಗಿ ಅಲ್ಲ . ಸಾರ್ವಜನಿಕರ ಉಪಯೋಗಕ್ಕಾಗಿ ಕೆಲಸ ಮಾಡಿದಾಗ ಅದನ್ನು ಶ್ಲಾಘಿಸಬೇಕು ಎಂದರು.

ಮುಂದುವರೆದ ಚರ್ಚೆಯಲ್ಲಿ ಸುನಿಲ್‌ ಕುಮಾರ್‌, ಕಳೆದ ಎರಡು ವರ್ಷಗಳ ಸರ್ಕಾರದ ಅವಧಿಯಲ್ಲಿ ಒಂದು ಮನೆಯನ್ನು ನೀಡಲಾಗಿಲ್ಲ. ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಸಾಕಷ್ಟು ಮಾತನಾಡಿದ್ದಾರೆ ನಾವು ಹೇಳುವ ಅಗತ್ಯ ಇಲ್ಲ. ಮನೆಗಳನ್ನು ನೀಡಲಾಗದಿದ್ದ ಮೇಲೆ ವಸತಿ ಇಲಾಖೆ ಏಕೆ ಬೇಕು, ಅದನ್ನು ಮುಚ್ಚಿಬಿಡಿ ಎಂದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರು ವಿರೋಧ ಪಕ್ಷದ ಶಾಸಕರ ಜೊತೆ ವಾಗ್ವಾದ ನಡೆಸಿದರು. ಹಿಂದಿನ ಸರ್ಕಾರ ನಿಗಮ ಮಂಡಳಿಗಳಿಗೆ ಸಾವಿರದ ಇನ್ನೂರು ಕೋಟಿಗಳ ಅನುದಾನ ನೀಡಿತ್ತು. ಈ ಸರ್ಕಾರ 1015 ಕೋಟಿ ಮಾತ್ರ ಒದಗಿಸಿದೆ. ಯಾವುದಕ್ಕೂ ಹಣ ಇಲ್ಲ ಎಂಬಂತಾಗಿದೆ ಎಂದು ದೂರಿದರು.

ಬೆಳೆ ಹಾನಿಗಳಿಗೆ ಸ್ಪಂದಿಸುತ್ತಿಲ್ಲ ಮಳೆ ಹಾನಿಯಿಂದ ಕರಾವಳಿ ಭಾಗದಲ್ಲಿ ಸಾಕಷ್ಟು ನಷ್ಟವಾಗಿದೆ. ಅಲ್ಲಿಗೆ ಸ್ಪಂದಿಸುವ ಬದಲಾಗಿ ವೈನಾಡಿನಲ್ಲಿನ ಗುಡ್ಡ ಕುಸಿತಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿದೆ ಎಂದು ಆಕ್ಷೇಪಿಸಿದರು.

ಅಜೀಮ್‌ ಪ್ರೇಮ್‌ ಜಿ ಸಂಸ್ಥೆ ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ನೀಡಲು ಹಣ ನೀಡುತ್ತಿದೆ. ಅದರ ಸಮೀಕ್ಷೆ ನಡೆದಾಗ ಮೂರು ದಿನ ಮಾತ್ರ ಮೊಟ್ಟೆ ನೀಡುತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದ.  ದಾನಿಗಳು ಕೊಡುವ ನೆರವನ್ನು ಸರಿಯಾಗಿ ನಿರ್ವಹಣೆ ಮಾಡಲು ಸರ್ಕಾರಕ್ಕಾಗುತ್ತಿಲ್ಲ ಎಂದರು.

ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಸರ್ಕಾರದ ಹಣ ನೀಡುವ ಬದಲು ಸಾಮಾಜಿಕ ಹೊಣೆಗಾರಿಕೆಯ ನಿಧಿ ನಂಬಿಕೊಂಡಿರುವುದು ಸರಿಯಲ್ಲ. ರೈತರ ಮತ್ತು ಸರ್ಕಾರಿ ನೌಕರರ ಆತ್ಮಹತ್ಯೆಗಳು ಹೆಚ್ಚಾಗಿವೆ. ಸರ್ಕಾರ ಅದನ್ನು ಕಂಡು ಕಾಣದಂತಿದೆ. ಜಾತಿ ಗಣತಿಯ ವರದಿಯನ್ನು ಕಸದ ಬುಟ್ಟಿಗೆ ಹಾಕಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಲಾಗಿದೆ ಎಂದರು.

Leave a Reply