ಧರ್ಮಸ್ಥಳಫೈಲ್ಸ್: ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಪ್ರಕರಣ

9 months ago

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಸಮಾಧಿಗಳ ಉತ್ಖನನ ಪ್ರಕರಣ ವಿಧಾನಸಭೆಯಲ್ಲಿಂದು ಪ್ರಸ್ತಾಪವಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಪ್ರಶ್ನೋತ್ತರದ ಬಳಿಕ ಬಿಜೆಪಿಯ ಕಾರ್ಕಳದ ಶಾಸಕ ವಿ.ಸುನಿಲ್‌ಕುಮಾರ್‌ ಮಾತನಾಡಿ, ಅನಾಮಿಕ ದೂರುದಾರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶಿಸಿರುವ ಎಸ್‌‍ಐಟಿ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ತನಿಖೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಅವಹೇಳನ ನಡೆಯುತ್ತಿದೆ ಎಂದರು.

ಧರ್ಮಸ್ಥಳವನ್ನು ಗುರಿಯಾಗಿಸಿಕೊಳ್ಳಲಾಗಿದೆ, ನಮ್ಮ ನಂಬಿಕೆ ಶ್ರದ್ದೆಗಳ ಮೇಲೆ ದಾಳಿಯಾಗುತ್ತಿದೆ. ಈವರೆಗೂ 16 ಗುಂಡಿಗಳನ್ನು ಅಗೆಯಲಾಗಿದೆ. ಅಲ್ಲಿ ಏನು ಸಿಕ್ಕಿದೆ ಎಂಬುದು ಗೊತ್ತಾಗಿಲ್ಲ. ಸಚಿವರು ಉತ್ತರ ನೀಡಿ ಊಹಾಪೋಹಗಳಿಗೆ ತೆರೆ ಎಳೆಯಬೇಕು. ಇನ್ನು ಎಷ್ಟು ಗುಂಡಿಗಳನ್ನು ಅಗೆಯುತ್ತಿರಾ? ಎಲ್ಲಿಯವರೆಗೂ ತನಿಖೆ ನಡೆಯುತ್ತದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸರ್ಕಾರ ತನಗೆ ಬಂದ ದೂರುಗಳು ಹಾಗೂ ಧರ್ಮಸ್ಥಳ ಭಾಗದ ಜನ ಸಮುದಾಯದ ಒತ್ತಾಯದ ಮೇರೆಗೆ ಜು.19 ರಂದು ಎಸ್‌‍ಐಟಿ ತನಿಖೆಗೆ ಆದೇಶ ನೀಡಿದೆ. ತನಿಖೆ ಪ್ರಗತಿಯಲ್ಲಿದ್ದು ಪೂರ್ಣಗೊಂಡ ಬಳಿಕ ವರದಿ ನೀಡಲಾಗುವುದು ತನಿಖೆಗೆ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ನೂರಾರು ಗುಂಡಿಗಳನ್ನು ಅಗೆಯಲು ಸಾಧ್ಯವಿಲ್ಲ. ತನಿಖೆಯ ವರದಿ ಸಲ್ಲಿಕೆಯಾದ ಬಳಿಕ ಉತ್ತರ ನೀಡಲಾಗುವುದು ಎಂದರು.

ಈ ಹಂತದಲ್ಲಿ ಬಿಜೆಪಿಯ ಸದಸ್ಯರು ಆ ಅನಾಮಿಕ ಯಾರು ಆತ ತಲೆ ಬುರುಡೆಯನ್ನು ಎಲ್ಲಿಂದ ತಂದಿದ್ದ ಎಂದು ಪ್ರಶ್ನಿಸಿ ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್‌ ಇಷ್ಟು ದಿನ ಈ ಬಗ್ಗೆ ಸುಮನಿದ್ದು ಅಧಿವೇಶನದಲ್ಲಿ ಶೂನ್ಯ ವೇಳೆಗೆ ಚರ್ಚೆ ಮಾಡುತ್ತಿರುವುದು ಏಕೆ? ನಿಮ್ಮ ಅಭಿಪ್ರಾಯಗಳಿದ್ದರೆ ಲಿಖಿತ ರೂಪದಲ್ಲಿ ನೀಡಿ ಎಂದು ಸೂಚಿಸಿದರು.

ಬಿಜೆಪಿಯ ಸುರೇಶ್‌ಕುಮಾರ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ ಅವರು ಮಂಗಳೂರು ಪೊಲೀಸರು ಪ್ರಕರಣವನ್ನು ಸರಿಯಾಗಿ ನಿಭಾಯಿಸಿದ್ದರು. ಆದರೆ ಎಡಪಂಥೀಯರ ಒತ್ತಾಯದ ಮೇರೆಗೆ ಎಸ್‌‍ಐಟಿ ತನಿಖೆ ವಹಿಸಲಾಗಿದೆ ಎಂದು ಹೇಳಿದ್ದರಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಂತರ ಸಚಿವ ದಿನೇಶ್‌ ಗುಂಡೂರಾವ್‌ ಮಧ್ಯ ಪ್ರವೇಶ ಮಾಡಿ, ಎಡಪಂಥೀಯರಲ್ಲ, ಜನ ಸಮುದಾಯದವರು ಹಾಗೂ ವಿವಿಧ ವ್ಯಕ್ತಿಗಳು ತನಿಖೆಗೆ ಆಗ್ರಹಿಸಿದ್ದರು ಎಂದು ನಾನು ಹೇಳಿದ್ದೇನೆ. ಮಂಗಳೂರು ಪೊಲೀಸರ ಉತ್ತಮ ಕಾರ್ಯವನ್ನು ಶ್ಲಾಘಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ವಿಪಕ್ಷದ ನಾಯಕ ಆರ್‌ . ಅಶೋಕ್‌ ಇದು ಗಂಭೀರವಾದ ಹಾಗೂ ಸೂಕ್ಷ್ಮವಾದ ಪ್ರಕರಣ ವಿಶೇಷ ಚರ್ಚೆಗೆ ಅವಕಾಶ ಕೊಡಿ ಎಂದರು.

ಆ.12ರ ವರೆಗಿನ ತನಿಖೆಯ ಫಲಿತಾಂಶವೇನು ಎಂದು ಸದನದ ಮುಂದಿಡಿ. ಅಗತ್ಯ ಬಿದ್ದರೆ ಎಸ್‌‍ಐಟಿಯಿಂದ ಮಧ್ಯಂತರ ವರದಿ ಪಡೆದುಕೊಳ್ಳಿ ಎಂದು ಮತ್ತೆ ಶಾಸಕ ಸುನಿಲ್‌ಕುಮಾರ್‌ ಆಗ್ರಹಿಸಿದರು.

ಎಸ್‌‍ಐಟಿ ತನಿಖಾ ವರದಿ ಸಲ್ಲಿಸುವ ಮೊದಲು ಚರ್ಚೆ ನಡೆಸುವುದು ಅನಗತ್ಯ. ನಾನು ಉತ್ತರವನ್ನು ನೀಡುವುದಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದ್ದರು ಅಲ್ಲಿಗೆ ಚರ್ಚೆಗೆ ತೆರೆಬಿತ್ತು.

Leave a Reply