ನಮ್ಮ ಶಾಲೆಯ ಮಕ್ಕಳು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು:  ರಾಮಲಿಂಗಾರೆಡ್ಡಿ

9 months ago

ಬಾಲಕ, ಬಾಲಕಿಯರ ವಾಲಿಬಾಲ್ ಚಾಂಪಿಯನ್ ಶಿಪ್

28ನೇ ರಾಜ್ಯಮಟ್ಟದ ಅಂತರ ಶಾಲಾ ಚಾಂಪಿಯನ್ ಶಿಪ್

ಬಾಂಧವ ಕೌನ್ಸಿಲರ್ ಕಪ್-2025

ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ 

ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ, ಕ್ರೀಡೆಯಲ್ಲಿ ಪ್ರೋತ್ಸಾಹ

ಬೆಂಗಳೂರು: ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 28ನೇ ರಾಜ್ಯಮಟ್ಟದ ಅಂತರಶಾಲಾ ವಾಲಿಬಾಲ್ ಚಾಂಪಿಯನ್ ಶಿಪ್ ಬಾಲಕ, ಬಾಲಕಿಯರ ಬಾಂಧವ ಕೌನ್ಸಿಲರ್ ಕಪ್-2025 ಮೂರು ದಿನಗಳ ಕಾಲ ನಡೆಯಲಿದೆ.

ಉದ್ಘಾಟನೆಯನ್ನು  ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ವಿನಯ್ ಗುರೂಜಿ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸೌಮ್ಯರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ, ಬಾಂಧವ ಸಂಸ್ಥೆ ಸಂಸ್ಥಾಪಕ ಎನ್.ನಾಗರಾಜು, ಪದ್ಮನಾಭನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ವಾಲಿಬಾಲ್ ಚೆಂಡು ಹೊಡೆಯವ ಮೂಲಕ ನಂತರ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಇದೇ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ನಾವು ಸಸಿ ನೆಟ್ಟ ಮೇಲೆ ಗಿಡವಾಗಬೇಕಾದರೆ ನೀರು, ಬಿಸಿಲು, ನೆರಳು ಎಲ್ಲವು ಸರಿಯಾಗಿ ಇದ್ದಾಗ ದೊಡ್ಡ ಮರವಾಗಿ ಬೆಳಯುತ್ತದೆ. ಅದೇ ರೀತಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಾಲೆ, ಗುರುಗಳ ಮಾರ್ಗದರ್ಶನದಿಂದ ಒಳ್ಳೆಯ ವಿದ್ಯಾರ್ಥಿಯಾಗಿ ರೂಪಗೊಳ್ಳಬಹುದು. ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿ ಇರಬೇಕು ಎಂದರೆ ಕ್ರೀಡಾ ಚಟುವಟೆಕೆ ಮುಖ್ಯ ಎಂದರು.

ನಮ್ಮ ಬಿಟಿಎಂ ಮತ್ತು ಜಯನಗರ ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಶಾಲೆ ನಿರ್ಮಿಸಿ, ಶ್ರೀಮಂತರ ಮಕ್ಕಳಿಗೆ ಸಿಗುವ ಶಿಕ್ಷಣದಲ್ಲಿನ ಸೌಲತ್ತು, ಸೌಲಭ್ಯಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗುವಂತೆ ಮಾಡಲಾಗಿದೆ ಎಂದರು.

ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ಅನುಕೂಲವಾಗಲಿ ಎಂದು ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.

ಮಕ್ಕಳು ನಲಿಯುತ್ತ ಕಲಿಯಬೇಕು, ಎಲ್ಲ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು,  ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ  ಮಕ್ಕಳು ಪದಕ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಎನ್.ನಾಗರಾಜುರವರ ಬಾಂಧವ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ವಿನಯಗುರೂಜಿ ಮಾತನಾಡಿ, ಮಕ್ಕಳು ದೇವರ ಸಮಾನ. ಅವರನ್ನ ಪ್ರೀತಿ, ವಿಶ್ವಾಸದಿಂದ ಬೆಳಸಬೇಕು. ತಂದೆ, ತಾಯಿ ಮತ್ತು ಸಮಾಜದಿಂದ ಮಕ್ಕಳಿಗೆ ಪ್ರೀತಿ, ವಿಶ್ವಾಸ ಸಿಕ್ಕಾಗ ಮಕ್ಕಳು ಕೆಟ್ಟದಾರಿಗೆ ಹೋಗುವುದಿಲ್ಲ ಎಂದರು.

ಮಕ್ಕಳಿಗೆ ಕ್ರೀಡಾಸಕ್ತಿ ಬೆಳಸಬೇಕು, ತಂದೆ, ತಾಯಿ ಮತ್ತು ಶಿಕ್ಷಕರು ಮಕ್ಕಳಿಗೆ ಯಾರ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದು ತಿಳಿದುಕೊಂಡು ಅದರಲ್ಲಿ ಅವರಿಗೆ ತೊಡಗಿಸಿಕೊಳ್ಳಲು ಪೇರಣೆ ನೀಡಬೇಕು. ಕ್ರೀಡೆಗೆ ಪ್ರೋತ್ಸಾಹ, ಸಹಕಾರ ಸಿಕ್ಕಾಗ ನಮ್ಮ ಮಕ್ಕಳು ಸಹ ಒಲಿಂಪಿಕ್ , ಏಷಿಯಾಡ್ ಗೇಮ್ಸ್ ನಲ್ಲಿ ಪದಕ ಗಳಿಸಲು ಸಾಧ್ಯವಾಗುತ್ತದೆ ಎಂದರು. 

ಬಾಂಧವ ಅಧ್ಯಕ್ಷ ಎನ್.ನಾಗರಾಜು ಮಾತನಾಡಿ, ಬಾಂಧವ ಸಾಮಾಜಿಕ ಸೇವಾ ಸಂಘಟನೆಯು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಜಾಗೃತಿ ಕುರಿತು ನಿರಂತರ ಕಾಳಜಿವಹಿಸಿ ಶ್ರಮಿಸುತ್ತಿದೆ. ನಮ್ಮ ಸಂಸ್ಥೆ ವತಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಾಹ ಜೊತೆಯಲ್ಲಿ ಕ್ರೀಡಾಸಕ್ತಿ ಬೆಳಸುತ್ತಿದೆ ಎಂದರು.

ಚಿಕ್ಕ ಮಕ್ಕಳು ದೈಹಿಕವಾಗಿ ಶಕ್ತಿವಂತರಾಗಬೇಕು, ಸಶಕ್ತ, ಸದೃಢ ಮಕ್ಕಳು ಇದ್ದಾಗ ದೇಶ ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಶಾಲೆಯ ತಂಡಗಳು 3500ಮಕ್ಕಳು ಮೂರು ದಿನಗಳ ಕಾಲ ಬಾಲಕ-ಬಾಲಕಿಯರು ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಗೆದ್ದ ತಂಡಗಳಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ ಮತ್ತು ಹಿರಿಯ ವಾಲಿಬಾಲ್ ಕ್ರೀಡಾಪಟುಗಳಿಗೆ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದರು.

Leave a Reply