ರೈಲ್ವೆ ಯೋಜನೆಗಳನ್ನು ವಿಸ್ತರಿಸುತ್ತಿರುವುದು ಶ್ಲಾಘನೀಯ:  ಎಚ್ ಮುನಿಯಪ್ಪ

10 months ago

ಬೆಂಗಳೂರು: ನಗರದ ಕುಮಾರ ಕೃಪಾದಲ್ಲಿ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೊಮ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಹೊರವರ್ತುಲ ರೈಲ್ವೆ ಯೋಜನೆ ಕುರಿತು ಪೂರ್ವಭಾವಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ, ಕೇಂದ್ರದಲ್ಲಿ ರೈಲ್ವೆ ಸಚಿವನಾಗಿದ್ದಾಗ ಜಾರಿಗೊಳಿಸಿದ್ದ ಪ್ರಮುಖ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ರೈಲ್ವೆ ಸಚಿವರ ಬಳಿ ಮನವಿ ಮಾಡಿದರು.

ದೇಶದ ಪ್ರಗತಿಗಾಗಿ ಉತ್ತಮ ಯೋಜನೆಗಳನ್ನು ತಾವು ರೂಪಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ನಿಮ್ಮ ಕ್ರಿಯಾ ಯೋಜನೆಗಳು ಕನಿಷ್ಠ 50 ವರ್ಷಗಳ ದೂರದೃಷ್ಟಿಯೊಂದಿಗೆ ರೂಪಿತವಾಗಿರಬೇಕು ಎಂದರು.

ವರ್ತುಲ ಮಾರ್ಗಗಳ ನಿರ್ಮಾಣದ ಸಂದರ್ಭದಲ್ಲಿ ಕೃಷಿ ಹಾಗೂ ನೀರಾವರಿ ಭೂಮಿಯನ್ನು ಹೊರತುಪಡಿಸಿ ಇತರ ಭೂಮಿಯನ್ನು ಬಳಸಿ ರಸ್ತೆ ನಿರ್ಮಾಣ ಮಾಡಬೇಕು. ಹಳ್ಳಿಗಳಲ್ಲಿ ಹಾದುಹೋಗುವ ರಸ್ತೆಗಳು ನಾಗರಿಕರಿಗೆ ಅನಾನುಕೂಲವಾಗಬಾರದು. ಹೀಗಾಗಿ ಹಳ್ಳಿಗಳನ್ನು ಬಿಟ್ಟುಕೊಡುವಂತೆ, ಸುಮಾರು 5 ಅಥವಾ 6 ಕಿ.ಮೀ ಮುಂದೆ ಹೋಗಿ ರಸ್ತೆಗಳ ನಿರ್ಮಾಣ ಮಾಡಬೇಕು ಎಂದರು.

ಬೆಂಗಳೂರು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಜನಸಂಖ್ಯೆ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಅನುಗುಣವಾಗಿ ತಾವು ರೈಲ್ವೆ ಯೋಜನೆಗಳನ್ನು ವಿಸ್ತರಿಸುತ್ತಿರುವುದು ಶ್ಲಾಘನೀಯ. ಈ ಯೋಜನೆಗಳು ಸಾಮಾನ್ಯ ನಾಗರಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ರೂಪಿತವಾಗಬೇಕು ಎಂದರು.

ನಗರದಲ್ಲಿ ಮೆಟ್ರೋ ಸಂಪರ್ಕ ಹೆಚ್ಚಾಗಿರುವುದರಿಂದ, ಆ ನೆಲೆಗೆ ಅನುಗುಣವಾಗಿ ಯೋಜನೆ ರೂಪಿಸುವ ಅಗತ್ಯವಿದೆ. ತಾವು ಯಾವುದೇ ಯೋಜನೆ ರೂಪಿಸುವ ಮೊದಲು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರೆ, ಯೋಜನೆ ಅನುಷ್ಠಾನಕ್ಕೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದರಿಂದ, ‘ಸ್ಮಾರ್ಟ್’ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗುತ್ತದೆ. ಲೆವೆಲ್ ಕ್ರಾಸಿಂಗ್ ರಸ್ತೆಗಳಾದ ಯಲಹಂಕದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ–ಬಂಗಾರಪೇಟೆ ಕಡೆ ರೈಲು ಮಾರ್ಗ ನಿರ್ಮಾಣವಾದರೆ ಅದು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.

Leave a Reply