ರೂಪಾ ಮೌದ್ಗಿಲ್ ಅವರಿಗೆ ವರ್ಗಾವಣೆ ಶಿಕ್ಷೆ

1 year ago

ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುವ ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ತಮ್ಮ ಅಧೀನ ಅಧಿಕಾರಿಯಿಂದ ದಾಖಲೆ ಕಳ್ಳತನ ಆರೋಪ ಎದುರಿಸಿದ್ದರು. 

ಇದರ ಬೆನ್ನಲ್ಲೇ ರೂಪಾ ಮೌದ್ಗಿಲ್ ಅವರಿಗೆ ವರ್ಗಾವಣೆ ಶಿಕ್ಷೆ ವಿಧಿಸಿದೆ. ಸದ್ಯಕ್ಕೆ ರಾಜ್ಯ ಪೊಲೀಸ್ ಅಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿರುವ ಡಿ. ರೂಪಾ ಅವರನ್ನು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಈ ಹುದ್ದೆಯನ್ನು ಇವರ ಇವರ ಸೇವಾ ಜೇಷ್ಠತೆಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗಿದೆ. ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿರುವ ರೂಪ ಅವರು ಈ ಹುದ್ದೆಯನ್ನು ಐಜಿಪಿ ಶ್ರೇಣಿಯಲ್ಲಿ ನಿಭಾಯಿಸಲಿದ್ದಾರೆ.

ಪೊಲೀಸ್ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದ ಡಿ. ರೂಪಾ ಮೌದ್ಗಿಲ್ ವಿರುದ್ಧ ದಾಖಲೆ ಕಳವು ಮಾಡಿರುವ ಆರೋಪ ಮಾಡಿ ಇವರ ಅಧೀನ ಅಧಿಕಾರಿ ಡಿಐಜಿ ವರ್ತಿಕಾ ಕಟಿಯಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿರುವ ವರ್ತಿಕಾ ಕಟಿಯಾರ್ ಐಜಿಪಿ ರೂಪಾ ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆ ಕಳವು ಮಾಡಿಸಿದ್ದಾರೆ. ಇದಕ್ಕೆ ಕೆಳಹಂತದ ಮೂವರು ಅಧಿಕಾರಿಗಳಾದ ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್ ಅವರನ್ನು ಬಳಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.

ಇದರ ಬೆನ್ನಲ್ಲೇ ಸರ್ಕಾರ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ರೂಪಾ ಮೌದ್ಗಿಲ್ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.

Leave a Reply