ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

1 year ago

ಬೆಂಗಳೂರು: ನಿಗದಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ರಾಜ್ಯದ 10 ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ.

ಬೆಸ್ಕಾಂ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ 10 ಅಧಿಕಾರಿಗಳ  ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ರಾಯಚೂರು, ಗದಗ, ಕೊಪ್ಪಳ, ಚಿತ್ರದುರ್ಗದಲ್ಲಿನ ಮನೆ ಇತರೆಡೆ  ಮುಂಜಾನೆಯಿಂದಲೇ ದಾಳಿ ನಡೆಸಿದರು.

ಬೆಸ್ಕಾಂ ಇಂಜಿನಿಯರ್ ಲೋಕೇಶ್ ಬಾಬು, ಕಂದಾಯ ಇಲಾಖೆ ಇನ್ಸ್ಪೆಕ್ಟರ್ ಸುರೇಶ್ ಬಾಬು, ಬಿಬಿಎಂಪಿ ತೆರಿಗೆ ಇನ್ಸ್ಪೆಕ್ಟರ್ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ
ಜಿಲ್ಲಾ ಆರೋಗ್ಯಾಧಿಕಾರಿ ಸುನೀಲ್ ಕುಮಾರ್, ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯ ಡಿವೈಎಸ್ಪಿ ನಂಜುಡಯ್ಯ, ಕಲಬುರುಗಿ ಮಹಾನಗರ ಪಾಲಿಕೆ ಇಂಜಿನಿಯರ್ ರಾಮಪ್ಪ, ರಾಯಚೂರಿನ ಅಬಕಾರಿ ಇನ್ಸ್ ಪೆಕ್ಟರ್ ರಮೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಬೆಂಗಳೂರು ಗ್ರಾಮಾಂತರ‌ ಬಿಹೆಚ್ಒ ಸುನೀಲ್  ಹಾಗೂ ಗದಗದ ಎಸ್ಡಿಎ ಲಕ್ಷ್ಮಣ್ ಅವರ ಕಚೇರಿ ಮನೆಗಳ ಮೇಲೆ‌ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಐದು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಆರ್ ಪಿ ಜಾಧವ್ ಮನೆ ಮತ್ತು ಕಚೇರಿ ಮೇಲೆ  ದಾಳಿ ನಡೆಸಿದರು.

ಚಿತ್ರದುರ್ಗದಲ್ಲಿ ದಾಳಿ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಅರಣ್ಯ ಇಲಾಖೆ ಎಸಿಎಫ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಿಠಲ್ ನಗರದಲ್ಲಿರುವ ಹಿರಿಯೂರು ಉಪ ವಿಭಾಗದ ಎಸಿಎಫ್ ಸುರೇಶ್ ಅವರ ಮನೆ ಸೇರಿ 4 ಕಡೆ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಚಳ್ಳಕೆರೆ ನಿವಾಸ, ಹೊಸ ಬ್ಯಾಡರಹಟ್ಟಿ ಮನೆ, ಬೆಂಗಳೂರು ನಿವಾಸ, ಹಿರಿಯೂರು ಕಚೇರಿ ಮೇಲೆ ದಾಳಿ ಮಾಡಿ ನಾಲ್ಕು ಕಡೆ ದಾಖಲೆ ಪರಿಶೀಲನೆ ನಡೆಸಿದ್ದಾರೆ

ಕೊಪ್ಪಳದಲ್ಲಿ ದಾಳಿ: ಕೊಪ್ಪಳ ಅಬಕಾರಿ ನಿರೀಕ್ಷಕ ರಮೇಶ ಅಗಡಿ ಅವರ ಬಿಟಿ ಪಾಟೀಲ್ ನಗರದ ಕಚೇರಿ, ಡಾಲರ್ಸ್ ಕಾಲೋನಿ ಬಾಡಿಗೆ ಮನೆ, ಸ್ವಗ್ರಾಮ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ತೋಟದ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಗದಗ್ ನಲ್ಲಿ ದಾಳಿ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಗದಗ ಜಿಲ್ಲಾ ಪಂಚಾಯಿತಿ ಎಸ್ಡಿಎ ಲಕ್ಷ್ಮಣ್ ಕರ್ಣಿ ಅವರ ಆರ್ ಕೆ ಬಡಾವಣೆಯ ಮನೆ ಸೇರಿದಂತೆ ಐದು ಕಡೆಗಳಲ್ಲಿ ಈ ದಾಳಿ ನಡೆದಿದೆ. ಗದಗ, ಗಜೇಂದ್ರಗಡ, ಹಾವೇರಿಯಲ್ಲಿ ಕರ್ಣಿಗೆ ಸಂಬಂಧಿಸಿದ ಮನೆ ಮತ್ತು ಆಸ್ತಿ ಪರಿಶೀಲನೆ ನಡೆಸುತ್ತಿದ್ದು, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟಾರೆ ಮೌಲ್ಯ ಸದ್ಯಕ್ಕೆ ತಿಳಿದುಬಂದಿಲ್ಲ.

ದಾಳಿಗೊಳಗಾದ ಅಧಿಕಾರಿಗಳು:
ಲೋಕೇಶ್ ಬಾಬು, ಇಂಜಿನಿಯರ್ ಬೆಸ್ಕಾಂ
ಸುರೇಶ್ ಬಾಬು, ಕಂದಾಯ ಇಲಾಖೆ ಇನ್ಸ್ಪೆಕ್ಟರ್
ಕೃಷ್ಣಪ್ಪ, ಬಿಬಿಎಂಪಿ ತೆರಿಗೆ ಇನ್ಸ್ಪೆಕ್ಟರ್
ಸುನೀಲ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ
ನಂಜುಡಯ್ಯ, ಡಿವೈಎಸ್ಪಿ, ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣ 
ರಾಮಪ್ಪ, ಇಂಜಿನಿಯರ್, ಮಹಾನಗರ ಪಾಲಿಕೆ ಕಲಬುರುಗಿ
ರಮೇಶ್, ಅಬಕಾರಿ ಇನ್ಸ್ ಪೆಕ್ಟರ್
ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಸುನೀಲ್ ಕುಮಾರ್, ಬಿಹೆಚ್ಒ
ಲಕ್ಷ್ಮಣ್, ಎಸ್ಡಿಎ

Leave a Reply